ಚಿಕ್ಕಬಳ್ಳಾಪುರ: ದೇವನಹಳ್ಳಿಯ ವಿಶ್ವನಾಥಪುರ ಠಾಣೆಯ ಪಿಎಸ್ಐ ಶ್ರೀನಿವಾಸ್ ಅವರು ವಿಕೃತ ಕಾಮಿ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಸದ್ಯ ಅವರ ಹೇಳಿಕೆ ವಿಡಿಯೋ ಭಾರೀ ವೈರಲ್ ಆಗಿದೆ.
ವಿಜಯಪುರದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಪಿಎಸ್ಐ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈಗ ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗುತ್ತಿವೆ.
ಶ್ರೀನಿವಾಸ್ ಅವರ ವಿರುದ್ಧ ಹೋರಾಟಕ್ಕೆ ಇಳಿದರೆ ನಾನು ಅವರಂತೆ ಆಗಬೇಕಾಗುತ್ತದೆ. ಅವರು ಲೇ ಅಂದರೆ ನಾನು ಲೇ ಎನ್ನಬೇಕಾಗುತ್ತದೆ. ಅಧಿಕಾರಕ್ಕೆ ಬಂದ ತಕ್ಷಣವೇ ಅವರನ್ನು ವರ್ಗಾವಣೆ ಮಾಡಲು ನಾನು ಮುಂದಾಗಿದ್ದೆ. ಆದರೆ ಪ್ರಕರಣಕ್ಕೆ ಸಿಲುಕಿ ಈಗ ಅವರು ಅಮಾನತ್ತು ಆಗಿದ್ದಾರೆ ಎಂದು ಹೇಳಿದರು.
ಪಿಎಸ್ಐ ಶ್ರೀನಿವಾಸ್ ಅವರು ಅಮಾಯಕರ ಬಳಿ 20 ಲಕ್ಷ ವಸೂಲಿ ಮಾಡಿದ್ದರು. ಇದನ್ನು ಮರೆ ಮಾಚಲು ಕೆಲವು ಬಡವರಿಗೆ ಐದು, ಹತ್ತು ಸಾವಿರ ರೂ. ದಾನ ಮಾಡಿದ್ದಾರೆ. ಇದರಿಂದಾಗಿ ಅವರ ಪರವಾಗಿ ಅನೇಕರು ಧ್ವನಿ ಎತ್ತುವಂತಾಯಿತು. ಅಲ್ಲದೇ ಇತ್ತೀಚೆಗೆ ಅಕ್ರಮ ಕಲ್ಲು ಸಾಗಾಣಿಕೆ ವಿಚಾರದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಗೆ ಬೆದರಿಕೆ ಹಾಕಿದ್ದರು. ಈ ಪ್ರಕರಣದಿಂದಾಗಿ ಶ್ರೀನಿವಾಸ್ ಅವರು ಅಮಾನತು ಕೂಡ ಆಗಿದ್ದರು. ಶ್ರೀನಿವಾಸ್ ಅವರ ಹಗರಣಗಳು ಸದ್ಯದಲ್ಲಿಯೇ ಹೊರ ಬೀಳಲಿವೆ ಎಂದು ಹೇಳಿದರು.
ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಯಾವುದೇ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿ, ಶುಭಕೋರಲಿಲ್ಲ. ಆದರೆ ನಂತರದ ದಿನಗಳಲ್ಲಿ ಅವರೇ ಭೇಟಿ ಮಾಡಲು ಬಂದರು. ಈ ವೇಳೆ ಯಾರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲವೋ ಅವರು ಕೆಲಸ ಬಿಟ್ಟು ಮನೆಗೆ ಹೋಗಬಹುದು. ಇಲ್ಲವೇ ಬೇರೆ ಕಡೆಗೆ ವರ್ಗ ಮಾಡಿಸಿಕೊಂಡು ಹೋಗಬಹುದು ಎಂದು ತಾಖೀತು ಮಾಡಿರುವೆ ಎಂದು ಶಾಸಕರು ಹೇಳಿದ್ದರು.