ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಸಂಬಂಧಿಯೊಬ್ಬ 11 ವರ್ಷದ ಬಾಲಕಿಯ ಶಿರಚ್ಛೇದ ಮಾಡಿರುವ ಘಟನೆ ನಡೆದಿದ್ದು, ಪಶ್ಚಿಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಘಟನೆ ಖಂಡಿಸಿ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.
ಈ ಹಿಂದೆ ಹಲವು ಬಾರಿ ಬಾಲಕಿ ತಂದೆ ಸಾರ್ವಜನಿಕವಾಗಿ ಅವಮಾನಿಸಿ ಥಳಿಸಿದ್ದರಿಂದ ನಾನು ಆಕೆಯನ್ನು ಕೊಂದಿರುವುದಾಗಿ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿ ಬಾಲಕಿಯ ಶಿರಚ್ಛೇದ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿದ್ದನೆ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಜನವರಿ 29 ರಿಂದ ನಾಪತ್ತೆಯಾಗಿದ್ದ ಬಾಲಕಿಯ ಮುಂಡ ಮತ್ತು ತಲೆ ಮಾಲ್ಡಾ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದೆ. ಹುಡುಗಿಯ 27 ವರ್ಷದ ಚಿಕ್ಕಪ್ಪನನ್ನು ಸಿಸಿಟಿವಿ ಫೂಟೇಜ್ ಮೂಲಕ ಪತ್ತೆಹಚ್ಚಲಾಗಿದೆ. ಹುಡುಗಿ ಕಾಣೆಯಾಗುವ ಮೊದಲು ಆತ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದ.
ಆರೋಪಿ ಮೊದಲಿಗೆ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದ. ಆದರೆ ನಂತರ ಆಕೆಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವ್ಯಕ್ತಿಯನ್ನು ಬಂಧಿಸಿ 12 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ನಗರದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದು, ಅಮಾನುಷವಾಗಿ ಕೊಲೆ ಮಾಡಿರುವ ಬಾಲಕಿಯ ಚಿಕ್ಕಪ್ಪನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಘಟನೆಯನ್ನು ಖಂಡಿಸಿ ಬಿಜೆಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕೂಡ ಪ್ರತಿಭಟನಾ ರ್ಯಾಲಿಗಳು ಮತ್ತು ಮೌನ ಜಾಗರಣೆ ನಡೆಸಿದ್ದವು.