ನವದೆಹಲಿ: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ ಅಧಿಕೃತವಾಗಿದೆ. ಈ ಮೂಲಕ ಭಾರತದ ಬುಡಕಟ್ಟು ಜನಾಂಗದ ಮೊದಲ ರಾಷ್ಟ್ರಪತಿಯಾಗಿದ್ದಾರೆ. ದೇಶದ ದ್ವಿತೀಯ ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲಲು 5,43,000 ಮತಗಳ ಅಗತ್ಯವಿತ್ತು. ಆದರೆ ಮುರ್ಮು ಪರವಾಗಿ 6,76,803 ಮತ ಅಂದರೆ ಶೇ.64ರಷ್ಟು ಮತಗಳು ಚಲಾವಣೆಯಾಗಿದ್ದರೆ ಯಶವಂತ್ ಸಿನ್ಹಾ ಪರವಾಗಿ 3,80,177 ಮತಗಳು ಅಂದರೆ ಶೇ.35.97 ರಷ್ಟು ಮತಗಳು ಚಲಾವಣೆಯಾಗಿದೆ.
ಗೆಲುವು ಖಚಿತ ಪಡೆಸಿಕೊಂಡ ಮುರ್ಮು, ಭಾರತ ಸ್ವತಂತ್ರ್ಯ ನಂತರ ಜನಿಸಿ ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇದೇ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಯಾರಿಗೂ ಭಯಪಡದೆ ಸಂವಿಧಾನದ ಪಾಲಕರಾಗಬೇಕು: ದ್ರೌಪದಿ ಮುರ್ಮುಗೆ ಅಭಿನಂದಿಸಿದ ಯಶವಂತ್ ಸಿನ್ಹಾ
Smt. Droupadi Murmu Ji has been an outstanding MLA and Minister. She had an excellent tenure as Jharkhand Governor. I am certain she will be an outstanding President who will lead from the front and strengthen India's development journey.
— Narendra Modi (@narendramodi) July 21, 2022
ದ್ರೌಪದಿ ಮುರ್ಮ ಗೆಲುವಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಕೇಂದ್ರ ಸಚಿವರು ಅಭಿನಂದನೆ ತಿಳಿಸಿದ್ದಾರೆ. ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗುತ್ತಿದ್ದಂತೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
64 ವರ್ಷದ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಗೆಲ್ಲುವುದು ಮೊದಲೇ ಖಚಿತವಾಗಿದ್ದ ಕಾರಣ ಅವರ ಹುಟ್ಟೂರು ಒಡಿಶಾದ ಉಪರ್ಪೇಡ ಗ್ರಾಮದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಸಂಭ್ರಮ ಮನೆ ಮಾಡಿತ್ತು. ಸಂತಾಲ್ ಸಮುದಾಯದ ಸಾಂಪ್ರದಾಯಿಕ ನೃತ್ಯ ಕೋಯಾ ಶೈಲಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಮುರ್ಮು ಅವರು ವಾಸವಿರುವ ರಾಯ್ರಂಗಪುರದಲ್ಲಿಯೂ ಸಂಭ್ರಮ ಮನೆ ಮಾಡಿದೆ.
ದ್ರೌಪದಿ ಮುರ್ಮು ಯಾರು?
1958ರ ಜೂನ್ 20 ರಂದು ಒಡಿಶಾದ ಉಪರ್ಪೆಡದಲ್ಲಿ ಜನಿಸಿದ ದ್ರೌಪದಿ ಮುರ್ಮು ಆರಂಭದಲ್ಲಿ ಶಾಲಾ ಶಿಕ್ಷಕಿ ಮತ್ತು ನೀರಾವರಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿದ ಇವರು 1997ರಲ್ಲಿ ರಾಯ್ರಂಗಪುರ ಪುರಸಭೆ ಸದಸ್ಯೆಯಾದರು. ಬಳಿಕ ಬಿಜೆಪಿ ಬುಡಕಟ್ಟು ಮೋರ್ಚಾ ಉಪಾಧ್ಯಕ್ಷೆಯಾಗಿದ್ದ ಮುರ್ಮು ಒಡಿಶಾದ ಬಿಜೆಪಿ-ಬಿಜೆಡಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. 6 ವರ್ಷ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಪತಿ ಶ್ಯಾಂ ಚರಣ್ ಮುರ್ಮು ಮತ್ತು ಇಬ್ಬರು ಗಂಡು ಮಕ್ಕಳು ವಿಧಿವಶರಾಗಿದ್ದು ಪುತ್ರಿ ಇತಿಶ್ರೀ ಮುರ್ಮು ಇದ್ದಾರೆ.