ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯದಲ್ಲಿ ಪ್ರಚಾರ ಬಿರುಸುಗೊಳಿಸಿದ್ದಾರೆ. ಇದೇ ಮಾರ್ಚ್ 25 ರಂದು ಮತ್ತೊಮ್ಮೆ ರಾಜ್ಯಕ್ಕೆ ಮೋದಿ ಎಂಟ್ರಿ ಕೊಡ್ತಿದ್ದಾರೆ. ಬೆಂಗಳೂರಿನಲ್ಲಿ ರೋಡ್ ಶೋ (Modi RoadShow) ಮಾಡುವ ಮೂಲಕ ಮೋಡಿ ಮಾಡಲಿದ್ದಾರೆ.
28 ವಿಧಾನಸಭಾ ಕ್ಷೇತ್ರಗಳಿರುವ ಬೆಂಗಳೂರಿನ (Bengaluru) ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, 20 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಮೋದಿಯವರು ಬೆಂಗಳೂರಿಗೆ ವಿಶೇಷ ಆದ್ಯತೆ ಕೊಟ್ಟಿದ್ದಾರೆ. 25 ರಂದು ಬೆಂಗಳೂರಿಗೆ ಬರುತ್ತಿರುವ ಅವರು, ಅಂದು ನೂತನ ಮೆಟ್ರೋ ಮಾರ್ಗ (ವೈಟ್ ಫೀಲ್ಡ್, ಕೆ.ಆರ್ ಪುರದವರೆಗಿನ ಮಾರ್ಗ) ಲೋಕಾರ್ಪಣೆಗೊಳಿಸಲಿದ್ದಾರೆ. ಅದೇ ಸಂದರ್ಭದಲ್ಲಿ ಮೆಗಾ ರೋಡ್ ಶೋ ನಡೆಸಿ ರಾಜಧಾನಿಯ ಮತದಾರರನ್ನ ಸೆಳೆಯುವ ಕಸರತ್ತು ನಡೆಸಲಿದ್ದಾರೆ.
ಈ ಬಾರಿಯೂ ಮೋದಿಯವರು ಅಭಿವೃದ್ಧಿಯ ಮಂತ್ರದಂಡ ಹಿಡಿದುಕೊಂಡೇ ಆಗಮಿಸುತ್ತಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಶನಿವಾರ ವೈಟ್ಫೀಲ್ಡ್ ಮೆಟ್ರೋ (Namma Metro) ಸ್ಟೇಷನ್ಗೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ. ಜೊತೆಗೆ ಟ್ವೀಟ್ ಮೂಲಕ ಪ್ರಧಾನಿಯಿಂದಲೇ ಉದ್ಘಾಟನೆ ಅಂತಾ ಶಾಸಕರು ದೃಢಪಡಿಸಿದ್ದಾರೆ. ಇದನ್ನೂ ಓದಿ: BJP ಚುನಾವಣೆ ಗೆಲ್ಲೋಕೆ ರೌಡಿ ಶೀಟರ್ಗಳನ್ನ ಸೇರಿಸಿಕೊಳ್ತಿದೆ – ಹೆಚ್ಡಿಕೆ ವಾಗ್ದಾಳಿ
ʻಈ ಮೆಟ್ರೋ ಮಾರ್ಗ ಈಗಾಗಲೇ ಟ್ರಯಲ್ ರನ್ ಮುಗಿಸಿ ಉದ್ಘಾಟನೆಗೆ ಸಜ್ಜಾಗಿದೆ. ವೈಟ್ ಫೀಲ್ಡ್ನಿಂದ ಕೆ.ಆರ್ ಪುರ 13.75 ಕಿಮೀ ಸಂಪೂರ್ಣವಾಗಿದ್ದು ಪ್ರಧಾನಿ ಮೋದಿಯಿಂದಲೇ ಉದ್ಘಾಟನೆಗೊಳ್ಳುತ್ತಿದೆ. ಈ ಮೆಟ್ರೋ ಮಾರ್ಗಕ್ಕೆ ಚಾಲನೆ ಕೊಡುವ ಮೂಲಕ ಬೆಂಗಳೂರಿನ ಟೆಕ್ಕಿಗಳಿಗೆ ಪಿಎಂ ಗಿಫ್ಟ್ ಕೊಡುತ್ತಿದ್ದಾರೆ. ಇದರೊಂದಿಗೆ ಟ್ರಾಫಿಕ್ ದಟ್ಟಣೆಯಿಂದ ಐಟಿ ಕಾರಿಡಾರ್ಗೆ ರಿಲೀಫ್ ಸಿಗಲಿದೆ. ವೈಟ್ ಫೀಲ್ಡ್ ನಿಂದ ಕೆ.ಆರ್.ಪುರ ಪ್ರಯಾಣ 1 ಗಂಟೆಯಿಂದ ಇನ್ಮುಂದೆ 20-25 ನಿಮಿಷಕ್ಕೆ ಕಡಿತವಾಗಲಿದೆʼ ಎಂದು ಲಿಂಬಾವಳಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲದೇ ಯಾರೇ ಸ್ಪರ್ಧೆ ಮಾಡಿದ್ರು ನನ್ನ ಗೆಲುವು ಶತಸಿದ್ಧ – ಕೋಲಾರ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್
ಇದಕ್ಕೂ ಮುನ್ನ ವೈಟ್ಫೀಲ್ಡ್ ನಲ್ಲಿ 1.5 ಕಿಮೀ ವರೆಗೆ ಪ್ರಧಾನಿ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಮಹಾದೇವಪುರ ಕ್ಷೇತ್ರದ ಸತ್ಯಸಾಯಿ ಆಶ್ರಮದಿಂದ ವೈಟ್ಫೀಲ್ಡ್ ಮೆಟ್ರೋ ಸ್ಟೇಷನ್ ವರೆಗೆ ಮೋದಿ ರೋಡ್ ಶೋ ನಡೆಯಲಿದೆ. ಬಳಿಕ ಮೆಟ್ರೋ ಸ್ಟೇಷನ್ ಉದ್ಘಾಟಿಸಿ ಕೆ.ಆರ್ ಪುರ ಮೆಟ್ರೋ ಸ್ಟೇಷನ್ ವರೆಗೂ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಹಾಗಾಗಿ ಮೋದಿ ರೋಡ್ ಶೋ ಯಶಸ್ವಿ ಮಾಡಲು ಬಿಜೆಪಿ ಅಪಾರ ಜನ ಸೇರಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಐಟಿಬಿಟಿ ವಲಯ, ಉದ್ಯಮಿಗಳು, ಸುಶಿಕ್ಷಿತರು ಹೆಚ್ಚಾಗಿರುವ ಮಹಾದೇವಪುರ ಕ್ಷೇತ್ರದಲ್ಲಿ ಮೋದಿ ರೋಡ್ ಶೋ ಮೂಲಕ ಈ ವಲಯಗಳ ಮತದಾರರನ್ನು ಸೆಳೆಯಲು ಕಸರತ್ತು ನಡೆಸಲಿದ್ದಾರೆ. ಬೆಂಗಳೂರಿನ ರೋಡ್ ಶೋ ಮೂಲಕ ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಜಿಲ್ಲೆಗಳ ಮೇಲೂ ಪ್ರಧಾನಿಯವರು ಪ್ರಭಾವ ಬೀರುವ ನಿರೀಕ್ಷೆ ಇದೆ. ಆ ಮೂಲಕ ಮೋದಿ ಅಲೆ ಸೃಷ್ಟಿಸಿ ಮತಬೇಟೆಗೆ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.