ಹುಬ್ಬಳ್ಳಿ: ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ (Idgah Maidan) ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಬೆನ್ನಲ್ಲೇ, ಇಂದು ಶ್ರೀರಾಮಸೇನೆಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು (Kanakadasa Jayanti) ಶ್ರದ್ಧಾ ಮತ್ತು ಭಕ್ತಿ ಪೂರ್ವಕವಾಗಿ ಆಚರಣೆ ಮಾಡಲಾಯಿತು.
ಎಐಎಂಐಎಂ (AIMIM) ಪಕ್ಷದಿಂದ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೇಳಿಬಂದ ಹಿನ್ನೆಲೆ, ಶ್ರೀರಾಮಸೇನೆಯೂ ಸಹ ಕನಕದಾಸರ ಜಯಂತಿ ಆಚರಣೆಗೆ ಅನುಮತಿ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗಳನ್ನು ಪರಿಶೀಲನೆ ನಡೆಸಿದ್ದ ಮೇಯರ್ ಸರ್ವ ಪಕ್ಷಗಳ ಸಭೆ ನಡೆಸಿ, ಮೈದಾನದಲ್ಲಿ ಎಲ್ಲಾ ಸಮುದಾಯಗಳ ಜಯಂತಿ ಆಚರಣೆಗೆ ಅನುಮತಿ ನೀಡುವ ಮೂಲಕ, ವಿವಾದಿತ ಸ್ಥಳವನ್ನು ಸಾರ್ವಜನಿಕವಾಗಿಸಿದ್ದರು. ಹೀಗಾಗಿ ಶ್ರೀರಾಮಸೇನೆಯಿಂದ ಕನಕದಾಸ ಜಯಂತಿಯನ್ನು ಶಾಂತಿಯುತವಾಗಿ ಆಚರಣೆ ಮಾಡಲಾಯಿತು.
ಜಯಂತಿ ಆಚರಣೆಗೆ ಕೇವಲ 1 ಗಂಟೆ ಅವಕಾಶ ನೀಡಲಾಗಿತ್ತು. ಅಲ್ಲದೆ ಈ ಹಿಂದಿನಂತೆ ಮೈದಾನದ ನಡುವೆ ಪರದೆಯನ್ನು ಕಟ್ಟಲಾಗಿತ್ತು. ಈ ಹಿಂದೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಲ್ಲಿಯೇ, ಅದೇ ಅಳತೆಯ ಪೆಂಡಾಲ್ ಟೆಂಟ್ ಹಾಕಲಾಗಿತ್ತು. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik), ಕನಕದಾಸರ ಚಿಂತನೆಗಳನ್ನು ಸ್ಮರಣೆ ಮಾಡಿದರು. ಇದನ್ನೂ ಓದಿ: ನಾವೇನಾದರೂ ಸಿಡಿದೆದ್ದರೆ ನೀವು ಉಳಿಯುವುದಿಲ್ಲ – ಕಾಂಗ್ರೆಸ್ಗೆ ಮುತಾಲಿಕ್ ವಾರ್ನಿಂಗ್
ಇದಕ್ಕೂ ಮುನ್ನ ಮುತಾಲಿಕ್ ಮೈದಾನಕ್ಕೆ ಬರುತ್ತಿದ್ದಂತೆ, ನಿನ್ನೆ ಟಿಪ್ಪು ಜಯಂತಿ ಮಾಡಿದ್ದ ಸ್ಥಳದಲ್ಲಿ ಗೋ ಮೂತ್ರ ಸಿಂಪಡಣೆ ಮಾಡಿ ಸ್ಥಳ ಶುದ್ಧೀಕರಣ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಕಿನ್ನಾಳ ಕಲೆಯ ಕಾಮಧೇನು ಉಡುಗೊರೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ