-ರಾಜ್ಯದ ಹಲವೆಡೆ ಮೋಡದ ಅಡ್ಡಿ
ಬೆಂಗಳೂರು: ಅಪರೂಪದ ಅರ್ಧ ರಕ್ತ ಚಂದ್ರಗ್ರಹಣಕ್ಕೆ ಇಡೀ ಭೂಮಿ-ಆಕಾಶ ಸಾಕ್ಷಿಯಾಯ್ತು. 149 ವರ್ಷಗಳಲ್ಲೇ ಮೊದಲ ಬಾರಿಗೆ ವಿಶೇಷ ಚಂದ್ರಗ್ರಹಣ ನಡೆದಿದೆ.
ನಭೋ ಮಂಡಲದ ಈ ಅಪರೂಪದ ಕೌತುಕವನ್ನು ಭಾರತ ಸೇರಿದಂತೆ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾದ ಜನ ವೀಕ್ಷಿಸಿದರು. ಆದರೆ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡದಿಂದಾಗಿ ಗ್ರಹಣ ಕಾಣಿಸಲೇ ಇಲ್ಲ. ಇನ್ನುಳಿದಂತೆ ಕಲಬುರಗಿ, ಮೈಸೂರು, ದಾವಣಗೆರೆ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ರಹಣ ಗೋಚರಿಸಿತು. ಎರಡು ದಿನಗಳ ಮಟ್ಟಿಗೆ ನಭೋ ಮಂಡಲದಲ್ಲಿ ಗ್ರಹಣದ ಪರಿಣಾಮ ಇರಲಿದೆ.
ಭಾರತದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಗ್ರಹಣ ಗೋಚರಿಸಿತು. ಬರ್ಲಿನ್, ಚಿಕಾಗೋ, ಲಂಡನ್, ಮಲೇಷಿಯಾ ಸೇರಿದಂತೆ ಹಲವೆಡೆ ಅಪರೂಪದ ಗ್ರಹಣವನ್ನು ಜನ ಕಣ್ತುಂಬಿಕೊಂಡರು. ಗ್ರಹಣ ಹಿನ್ನೆಲೆಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಯಿತು. ರಾಯಚೂರು ಮತ್ತು ದಾವಣಗೆರೆಯ ರಾಘವೇಂದ್ರ ಸ್ವಾಮಿ ದೇಗುಲದಲ್ಲಿ ಹೋಮ-ಹವನ ನೆರವೇರಿಸಲಾಯ್ತು. ಇತ್ತ ಗ್ರಹಣ ಮುಗಿಯುತ್ತಿದ್ದಂತೆ ಚಿಕ್ಕಮಗಳೂರಿನ ಅನ್ನಪೂರ್ಣೇಶ್ವರಿಗೆ ಶುದ್ಧೋದಕ ಅಭಿಷೇಕ ಮಾಡಲಾಯಿತು. ಎಲ್ಲ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿದೆ.