ಬಾಗಲಕೋಟೆ: ಮತ್ತೆ ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟ ಮಾಡಲು ಮುಂದಾಗುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಹೇಳಿದ್ದಾರೆ.
ನಾಗರ ಪಂಚಮಿ (Nagara Panchami) ಸಂಬಂಧ ಬಾಗಲಕೋಟೆಯ ಬಾಲಮಂದಿರದ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದ ಅವರು, ಈ ಬಾರಿ ಲಿಂಗಪೂಜೆ ಮೂಲಕ ಮೀಸಲಾತಿ ಚಳುವಳಿ ಮಾಡುತ್ತೇವೆ. ಶ್ರಾವಣ ಮಾಸದ ವೇಳೆ ನಾವು ಇಷ್ಟಲಿಂಗ ಪೂಜೆ ಮಾಡುತ್ತೇವೆ. ಈಗ ಮೀಸಲಾತಿಗಾಗಿ ಇಷ್ಟಲಿಂಗ ಪೂಜೆ, ಜೊತೆಗೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಟೆಂಟ್ ನಡೆಸ್ತಿದ್ದವರು ಇಂದು 1,450 ಕೋಟಿ ಒಡೆಯರು, ಅನಧಿಕೃತ ಎಷ್ಟಿದೆಯೋ? – ಡಿಕೆ ಬ್ರದರ್ಸ್ ವಿರುದ್ಧ ಹೆಚ್ಡಿಕೆ ಕಿಡಿ
ಕಳೆದ ಬಾರಿ ಮೀಸಲಾತಿ ಹೋರಾಟ ಒಂದು ಹಂತಕ್ಕೆ ತಲುಪಿತ್ತು. ಆದ್ರೆ ಸರ್ಕಾರ ಬಹಳ ತಡ ಮಾಡಿ ನಮಗೆ 2ಡಿ ಕೊಟ್ಟಿತು, ಆದ್ರೆ ನಾವು 2ಎ ಕೇಳಿದ್ದೆವು. 2ಡಿ ಸಹ ಇನ್ನೂ ಜಾರಿಗೆ ಬಂದಿಲ್ಲ. ಆ ಕಾರಣಕ್ಕಾಗಿ ಸಚಿವೆ ಹೆಬ್ಬಾಳ್ಕರ್, ಶಾಸಕರಾದ ಕಾಶಪ್ಪನವರ್, ವಿನಯ್ ಕುಲಕರ್ಣಿ ಜೊತೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವೆ. ತಮ್ಮ ಅವಧಿಯಲ್ಲಿ ಸಮಾಜಕ್ಕೆ ನ್ಯಾಯ ಸಿಗಲಿ ಎಂದು ಮನವಿ ಮಾಡಿಕೊಂಡಿದ್ದೇವೆ ಎಂದರು.
ಸಿಎಂ ಸಿದ್ದರಾಮಯ್ಯ (CM Siddaramaiah) ಬಜೆಟ್ ಅಧಿವೇಶನ ಬಳಿಕ ಚರ್ಚೆ ಮಾಡಿ, ಮೀಸಲಾತಿಯ ಗೊಂದಲ ಪರಿಹರಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಅಧಿವೇಶನ ಮುಗಿದು ಒಂದು ತಿಂಗಳಾಯಿತು. ಅದಕ್ಕಾಗಿ ಸರ್ಕಾರಕ್ಕೆ ಈ ಬಾರಿ ಒತ್ತಡ ಹಾಕುತ್ತೇವೆ. ಆದಷ್ಟು ಬೇಗ ಕಾನೂನು ತಜ್ಞರನ್ನ ಕರೆದು, ಗೊಂದಲ ನಿವಾರಿಸಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಈಗಾಗಲೇ ಹೋರಾಟದ ಬಗ್ಗೆ ವಿಜಯಪುರ, ಕೂಡಲಸಂಗಮ, ಬೆಳಗಾವಿಯಲ್ಲಿ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಮುಂದೆ ರಾಜ್ಯ ಕಾರ್ಯಕಾರಿಣಿ ಸಭೆ ಕರೆದು ಹೋರಾಟದ ರೂಪುರೇಷೆ ಚರ್ಚಿಸಲಿದ್ದೇವೆ. ಜನರು ಮತ್ತೆ ಮೀಸಲಾತಿ ಹೋರಾಟ ಶುರು ಮಾಡಿ ಎಂದು ಹೇಳುತ್ತಿದ್ದಾರೆ. ಜನರ ಭಾವನೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಕಾರಣಕ್ಕೆ ರಾಜ್ಯ ಕಾರ್ಯಕಾರಿಣಿ ಸಭೆ ಕರೆದು, ಎಲ್ಲಿಂದ ಹೋರಾಟ ಶುರು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ. 2ಎಗೆ ಪಂಚಮಸಾಲಿ ಸಮಾಜ ಸೇರಬೇಕು ಎನ್ನುವುದು ನಮ್ಮ ಮುಖ್ಯ ಹೋರಾಟ. ಆದರೆ ಈ ವಿಷಯಕ್ಕೆ ಹೈಕೋರ್ಟ್ನಲ್ಲಿ ಸ್ಟೇ ಇದೆ. ನಮ್ಮ ಹೋರಾಟಕ್ಕೆ ಮಣಿದು 2ಡಿ ಕೊಟ್ಟಿದ್ದಾರೆ. ಈಗ ಅದು ಸುಪ್ರೀಂ ಕೋರ್ಟ್ಗೆ ಹೋಗಿದೆ. ಕೋರ್ಟ್ ಅಡೆತಡೆ ನಿವಾರಿಸಿ ರಾಜ್ಯ ಸರ್ಕಾರ ಯಾವ ರೀತಿ ನ್ಯಾಯ ಕೊಡುತ್ತದೆ ಎನ್ನುವುದು ಅವರಿಗೆ ಬಿಟ್ಟ ವಿಚಾರ. ಇನ್ನೆರಡು ದಿನಗಳಲ್ಲಿ ಸಮಾಜ ಮುಖಂಡರ ಸಭೆ ಕರೆದು ಹೋರಾಟದ ಬಗ್ಗೆ ಚರ್ಚಿಸಿ, ನಿರ್ಧರಿಸುತ್ತೇವೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸ್ವಾಮೀಜಿ ಹೇಳಿದರು.
Web Stories