ಉಡುಪಿ: ನಮ್ಮ ಸೈನಿಕರು ಸಾಧನೆ ಮಾಡಿದ್ದಾರೆ. ಆದ್ರೆ ಅದನ್ನು ಮೋದಿ ಮಾಡಿದ್ದಾರೆ ಎಂದು ನಾವು ಹೇಳಿಲ್ಲ. ಎಲ್ಲವನ್ನೂ ಮಾಡೋದಕ್ಕೆ ಮೋದಿ ಜೇಮ್ಸ್ ಬಾಂಡ್ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ಮಣಿಪಾಲದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಸೈನಿಕರ ಜಾತಿ ಹುಡುಕುವ ರೋಗ ಹಿಂದೆ ಇರಲಿಲ್ಲ. ಈಗ ಎಲ್ಲಾ ಘಟನೆಗೂ ಸಾಕ್ಷಿ ಕೇಳುವವರು ಹುಟ್ಟಿಕೊಂಡಿದ್ದಾರೆ. ನಮ್ಮ ಸೈನಿಕರು ಸಾಧನೆ ಮಾಡಿದ್ದಾರೆ. ಆದ್ರೆ ಅದನ್ನು ಮೋದಿ ಮಾಡಿದ್ದಾರೆ ಎಂದು ನಾವು ಎಲ್ಲೂ ಹೇಳಿಲ್ಲ. ಮೋದಿ ಎರಡೂ ಕೈಯಲ್ಲಿ ಪಿಸ್ತೂಲು ಹಿಡಿದು ಹೋರಾಡಲ್ಲ. ಸೈನ್ಯವನ್ನು ಟ್ಯೂನ್ ಮಾಡೋಕೆ ಮೋದಿಗೆ ಗೊತ್ತು ಎಂದು ಹೇಳಿದರು.
ಮೋದಿ ಭ್ರಷ್ಟಾಚಾರ ವಿರೋಧಿ ನೀತಿ ಕಠಿಣವಾಗಿದೆ. ನಮ್ಮ ಪಕ್ಷದ ಒಳಗೂ ಅನೇಕರಿಗೆ ಕಿರಿಕಿರಿ ಆಗುತ್ತದೆ. ಬೀದಿ ಕಸದ ಜೊತೆಗೆ ಮನೆಯ ಕಸವೂ ಗುಡಿಸಬೇಕು. ಮೋದಿಯ ಶಿಸ್ತು ಕೆಲ ಬಿಜೆಪಿಗರಿಗೇ ಆಗಲ್ಲ. ರಾಜಕೀಯ ಅಂದ್ರೆ ಲಫಂಗನ ಕೊನೆಯ ಮೆಟ್ಟಿಲು ಆಗಿರುತ್ತದೆ. ಮೋದಿಯವರು ರಾಜಕಾರಣಕ್ಕೆ ಕ್ರೆಡಿಬಿಲಿಟಿ ಕೊಟ್ಟರು ಅಂದ್ರು.
ಬರ್ತ್, ಮ್ಯಾರೇಜ್ ಸರ್ಟಿಫಿಕೇಟ್ ಹಿಡ್ಕೊಂಡು ವಿಧಾನಸಭೆಗೆ ಬರುವವರಿದ್ದಾರೆ. ಮೋದಿ ಜಾತಿ, ವಂಶದ ಆಧಾರದಲ್ಲಿ ರಾಜಕಾರಣ ಮಾಡಲಿಲ್ಲ. ಅವರು ಪಾರ್ಲಿಮೆಂಟ್ ಗೆ ತಲೆಬಾಗಿ ನಮಿಸಿ ಒಳಗೆ ಬರುತ್ತಾರೆ. ಈ ಬಡ್ಡಿ ಮಗಂಗೆ ಇದೆಲ್ಲಾ ಹೇಗೆ ಹೊಳೀತು ಎಂದು ಖರ್ಗೆ ಹೇಳ್ತಾರೆ. ಇದೆಲ್ಲಾ ಹೊಳೆಯೋದಲ್ಲ ಎದೆಯಲ್ಲಿ ಅರಳೋದು ಎಂದು ಖರ್ಗೆಗೆ ಗೊತ್ತಿಲ್ಲ ಎಂದು ಟಾಂಗ್ ನೀಡಿದ್ರು.
ಐಟಿ ದಾಳಿಯಾದ್ರೆ ಸಿಎಂ ಪ್ರತಿಭಟನೆ ಮಾಡ್ತಾರೆ. ಎರಡೂ ಪಕ್ಷಗಳ ಅಧ್ಯಕ್ಷರು ಬೀದಿಗೆ ಬರುತ್ತಾರೆ. ಐಟಿ ದಾಳಿ ಆಗಿರೋದು ಯಾರ ಮನೆಗೆ. ಯಾರದ್ದೋ ಮನೆಗೆ ರೇಡ್ ಆದ್ರೆ ಸಿಎಂ ಯಾಕೆ ಧರಣಿ ಮಾಡಬೇಕು. ಭ್ರಷ್ಟಾಚಾರಿಯನ್ನು ಬೀದಿಗೆ ತರುತ್ತೇನೆಂದು ಮೋದಿ ಅಂದಿದ್ದರು. ಆದ್ರೆ ಈ ರೀತಿ ಭ್ರಷ್ಟರು ಬೀದಿಗೆ ಬರುತ್ತಾರೆಂದು ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಮಹಿಳೆಯರ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಕ್ಯಾಬಿನೆಟ್ ನಲ್ಲಿ ಮಹಿಳೆಯರು ಪ್ರಮುಖ ಸ್ಥಾನ ಪಡೆದದ್ದು ಅರ್ಹತೆಯಿಂದ ಬಾಲಾಕೋಟ್ ದಾಳಿಯ ಒಂಬತ್ತು ಯುದ್ಧ ವಿಮಾನ ಪೈಕಿ ಒಂದನ್ನು ಲೇಡಿ ಪೈಲಟ್ ಚಾಲನೆ ಮಾಡಿದ್ದಾರೆ ಅಂದ್ರು.