ಚಿಕ್ಕೋಡಿ (ಬೆಳಗಾವಿ): ರಾಜ್ಯದಲ್ಲಿ ಟೊಮೆಟೋ (Tomato) ಬಳಿಕ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರ ಕೈ ಸುಡುತ್ತಿದೆ. ಕಳೆದ ವಾರ 30 ರಿಂದ 40 ರೂಪಾಯಿ ಇದ್ದ ಈರುಳ್ಳಿ (Onion) ಬೆಲೆ, ಈಗ 60 ರಿಂದ 80 ರೂ.ಗೆ ತಲುಪಿದೆ. ಹೀಗಾಗಿ ಈರುಳ್ಳಿ ಕೊಂಡುಕೊಳ್ಳುವವರ ಸಂಖ್ಯೆಯೂ ಇಳಿಕೆಯಾಗಿದೆ ಅಂತ ಈರುಳ್ಳಿ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಚಿಕ್ಕೋಡಿಯಲ್ಲಿ ಮಧ್ಯವರ್ತಿಗಳು ಈರುಳ್ಳಿಯನ್ನ ಸ್ಟಾಕ್ ಮಾಡಿಟ್ಟುಕೊಂಡು ಹೆಚ್ಚಿನ ಲಾಭ ಪಡೆಯುವ ಹುನ್ನಾರದಲ್ಲಿ ಇದ್ದಾರೆ. ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಸಿ ಇನ್ನಷ್ಟು ಬೆಲೆ ಏರುವ ನಿರೀಕ್ಷೆಯಲ್ಲಿದ್ದಾರೆ. ಬಡವರ ಪಾಡಂತೂ ಯಾರಿಗೂ ಹೇಳದ ಹಾಗೆ ಆಗಿದೆ. 100 ರೂ.ಗಳಲ್ಲಿ ವಾರದ ಸಂತೆ ಮಾಡುತ್ತಿದ್ದ ಬಡವರು ಒಂದು ಕೆಜಿ ಈರುಳ್ಳಿಗೆ 80 ರೂ. ಕೊಟ್ಟು ಖರೀದಿಸಲು ಕಷ್ಟಪಡುತ್ತಿದ್ದಾರೆ.
ಬಾಗಲಕೋಟೆಯಲ್ಲೂ (Bagalkote) ಇದೇ ಪರಿಸ್ಥಿತಿ ಕಂಡು ಬಂದಿದೆ. ಗ್ರಾಹಕರಿಗೂ ಖುಷಿಯಿಲ್ಲ, ರೈತರಿಗೂ ಖುಷಿಯಿಲ್ಲ. ಆದ್ರೆ ಮಧ್ಯವರ್ತಿಗಳಿಗೆ ಮಾತ್ರ ಬೆಲೆ ಏರಿಕೆಯಿಂದ ಸಂತಸ ತಂದಿದೆ. ರೈತರು ಬೆಲೆ ಏರಿಕೆಯಾದರೂ ಖುಷಿಪಡುತ್ತಿಲ್ಲ. ಮುಂಗಾರು ಮಳೆ ಕೈ ಕೊಟ್ಟ ಕಾರಣ ಈರುಳ್ಳಿ ಬಿತ್ತನೆಯಲ್ಲೂ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಒಣಬೇಸಾಯದ ಈರುಳ್ಳಿ ಒಣಗಿ ಹಾಳಾಗಿದೆ. ಬೋರ್ ವೆಲ್ ಅಂತರ್ಜಲ ಕಡಿಮೆಯಾಗಿ ನೀರಾವರಿ ಕೃಷಿಕರ ಈರುಳ್ಳಿ ಕೂಡ ಸರಿಯಾಗಿ ಬೆಳೆದಿಲ್ಲ. ಇದೆಲ್ಲ ಕಾರಣದಿಂದ ಈರುಳ್ಳಿ ಬೆಲೆ ಇಂದು ಗಗನಕ್ಕೆ ಏರಿದೆ. ಆದರೆ ಬೆಲೆ ಏರಿಕೆಯಾದರೂ ರೈತರಿಗೆ ಒಂದು ರೂಪಾಯಿ ಆದಾಯವೂ ಸಿಗ್ತಿಲ್ಲ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಒಟ್ಟಾರೆ ಒಂದು ಕಡೆ ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರು ಪರದಾಡುತ್ತಿದ್ದಾರೆ. ಆದರೆ ಬೆಲೆ ಏರಿದರೂ ಇಳುವರಿ ಹೊಡೆತದಿಂದ ಲಾಭವಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ.
Web Stories