ಉಡುಪಿ: ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಹೊಗೆ ಕಾಣಿಸಿಕೊಂಡಿದ್ದು, ಮಂಡ್ಯದಲ್ಲಿ ಬಂಡಾಯ ಎದ್ದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಎಚ್ಡಿಕೆ ವಿಶ್ರಾಂತಿ ಪಡೆಯುತ್ತಿರುವ ರೆಸಾರ್ಟಿಗೆ ನಿಖಿಲ್ ಆಗಮಿಸಿದ್ದಾರೆ.
ಇಂದು ಉಡುಪಿಯ ಕಾಪುವಿನಲ್ಲೇ ನಿಖಿಲ್ ಅವರು ಸಿಎಂ ಅವರೊಂದಿಗೆ ಉಳಿಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇತ್ತ ಮಂಡ್ಯ ಫಲಿತಾಂಶದ ವಿಚಾರವಾಗಿ ಬಹುಮುಖ್ಯ ಚರ್ಚೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದ್ದು, ಕ್ಷೇತ್ರದ ಫಲಿತಾಂಶದ ಬಗ್ಗೆ ನಿಖಿಲ್ ಚಿಂತಿತರಾಗಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಪುತ್ರನಿಗೆ ಸಿಎಂ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.
ಮಂಡ್ಯ ರೆಬೆಲ್ ಕಾಂಗ್ರೆಸ್ ನಾಯಕರೆಲ್ಲರೂ ಕೂಡ ಸುಮಲತಾ ಅವರೊಂದಿಗೆ ಡಿನ್ನರ್ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲಾ ನಾಯಕರು ಕೂಡ ಸುಮಲತಾ ಅಂಬರೀಶ್ ಅವರ ಪರ ಕೆಲಸ ಮಾಡಿದ್ದಾರೆ ಎಂಬ ಮಾತು ಕೇಳಿಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇತ್ತ ಕಾಂಗ್ರೆಸ್ ಪಕ್ಷದ ನಾಯಕರು ಮಂಡ್ಯ ಮುಖಂಡರ ಪರ ಪರೋಕ್ಷವಾಗಿ ಹೇಳಿಕೆ ನೀಡಿ ಸಮರ್ಥಿಸಿಕೊಂಡಿದ್ದಾರೆ.