ನವದೆಹಲಿ: ನಿನ್ನೆಯ ಹೋಳಿ ಹಬ್ಬಕ್ಕೆ ಹಲವು ಬಣ್ಣಗಳಿತ್ತು. ಇವತ್ತು ಒಂದೇ ಬಣ್ಣ ಅದೇ ಕೇಸರಿ. ಮುಳುಗುವ ಸೂರ್ಯನೂ ಕೇಸರಿಯಾಗಿದ್ದಾನೆ ಎಂದು ವ್ಯಾಖ್ಯಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಗೆಲುವನ್ನು ಬಣ್ಣಿಸಿದ್ದಾರೆ.
ಸಂಜೆ ದೆಹಲಿಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಮಾತನಾಡಿದ ಮೋದಿ, ಈ ವಿಜಯಯಾತ್ರೆಯ ಶಿಲ್ಪಿ ಅಮಿತ್ಶಾ ಎಂದು ಬಣ್ಣಿಸಿದರು. ಈ ಮಧ್ಯೆ ಆಜಾನ್ ಕೇಳಿ ಕೆಲ ನಿಮಿಷ ಮಾತು ನಿಲ್ಲಿಸಿದರು. ನಂತರ ಮಾತು ಆರಂಭಿಸಿ, ವಾಸ್ತು ಪ್ರಕಾರ ಈಶಾನ್ಯ ದಿಕ್ಕಿಗೆ ಮಹತ್ವ ಹೆಚ್ಚಿದೆ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಈಶಾನ್ಯ ರಾಜ್ಯಗಳ ಗೆಲುವು ರಾಜ್ಯಗಳು ಪ್ರಮುಖವಾದವು. ಈ ಗೆಲುವು ಹುಮ್ಮಸ್ಸು ತುಂಬಿದೆ. ಹಿಂಸಾಚಾರದಲ್ಲಿ ಮಡಿದ ಕಾರ್ಯಕರ್ತರಿಗೆ ಗೆಲುವನ್ನು ಅರ್ಪಿಸುತ್ತೇನೆ ಎಂದರು.
ಕರ್ನಾಟಕದಲ್ಲಿ 6 ತಿಂಗಳಲ್ಲಿ 2 ಡಜನ್ ಕಾರ್ಯಕರ್ತರ ಕೊಲೆಯಾಗಿದೆ. ಕೇರಳ, ಪಶ್ಚಿಮ ಬಂಗಾಳದಲ್ಲಿ ನಮ್ಮ ಕಾರ್ಯಕರ್ತರ ಕಗ್ಗೊಲೆ ಆಗುತ್ತಿದೆ. ಆದರೆ ನಮ್ಮ ಕಾರ್ಯಕರ್ತರು ಗೆಲುವನ್ನು ಹರಡುತ್ತಲೇ ಇದ್ದಾರೆ. ಕಾಂಗ್ರೆಸ್ಗೆ ಇಂಥ ದುಸ್ಥಿತಿ ಹಿಂದೆಂದೂ ಇರಲಿಲ್ಲ ಎಂದು ಛೇಡಿಸಿದರು.
Jab tak Odisha, West Bengal aur Kerala mein BJP nahi aa jaati tab tak party ka golden period shuru nahi hoga. Karnataka mein to hum jeetenge hi: BJP President Amit Shah pic.twitter.com/CgMQOnYsFi
— ANI (@ANI) March 3, 2018
ಕರ್ನಾಟಕದಲ್ಲಿಯೂ ಗೆಲುವು ನಮ್ಮದೆ:
ಈಶಾನ್ಯ ರಾಜ್ಯಗಳಲ್ಲಿ ಸಾಧಿಸಿರುವ ಗೆಲುವಿನ ಸಂತಸದಲ್ಲಿರುವ ಅಮಿತ್ ಶಾ ಕರ್ನಾಟಕ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದು ಉತ್ಸಾಹದಿಂದ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತ್ರಿವಳಿ ರಾಜ್ಯಗಳಲ್ಲಿ ಸಿಕ್ಕ ಭರ್ಜರಿ ಫಲಿತಾಂಶದಿಂದ ಕರ್ನಾಟಕದ ಮೇಲೆ ನಮ್ಮ ವಿಶ್ವಾಸ ಹೆಚ್ಚಾಗಿದೆ. ಇದೇ ಉತ್ಸಾಹದಿಂದ ವಿಜಯ ಪತಾಕೆಯನ್ನ ಹಾರಿಸಲು ಕರ್ನಾಟಕದ ಕಡೆಗೆ ಸಾಗುತ್ತೇವೆ ಎಂದರು.
ಕರ್ನಾಟಕ ಸೇರಿದಂತೆ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ನಮ್ಮ ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲಿದ್ದು, ತ್ರಿಪುರಾದಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೂ ನಮ್ಮ ಇತರ ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಲಿದ್ದೇವೆ. 25 ವರ್ಷಗಳ ನಂತರ ಸಿಪಿಎಂ ಕಮ್ಯೂನಿಸ್ಟ್ ಸರ್ಕಾರದ ಆಡಳಿತ ಈಗ ಅಂತ್ಯವಾಗಿದ್ದು, ಮೂರು ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ತನ್ನ ಶಕ್ತಿಯನ್ನು ಇಡೀ ದೇಶಕ್ಕೆ ತೋರಿಸುತ್ತಿದೆ ಎಂದರು.
ತ್ರಿಪುರಾದಲ್ಲಿ ನಡೆದ ರಾಜಕೀಯ ಹಿಂಸಾಚಾರದಲ್ಲಿ ಬಿಜೆಪಿಯ 9 ಕಾರ್ಯಕರ್ತರು ದುರ್ಮರಣ ಹೊಂದಿದ್ದರು. ಇದರ ವಿರುದ್ಧ ಸಿಡಿದ ಅಮಿತ್ ಶಾ, ಎಡಪಕ್ಷಗಳ ಆಳ್ವಿಕೆ ಭಾರತಕ್ಕೆ ಯಾವತ್ತು ಒಳ್ಳೆಯದಾಗಿಲ್ಲ. ಇಂತಹವರು ಯಾರಿಗೂ ಬೇಡ. ಕಾಂಗ್ರೆಸ್ ಪಕ್ಷವು ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಯಾವುದೇ ಸ್ಥಾನಗಳನ್ನ ಗೆದ್ದಿಲ್ಲ ಎಂದು ಹೇಳಿದರು.
ಬಿಜೆಪಿಯು ಹಣ ಮತ್ತು ಕಾರ್ಯಕರ್ತರ ಶ್ರಮವನ್ನ ದುರುಪಯೋಗ ಪಡಿಸಿಕೊಂಡಿದೆ ಎನ್ನುವ ವಿರೋಧಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾ, ಇಲ್ಲಿಯವರೆಗೂ ಎಡಪಕ್ಷಗಳು ಆಳಿದ ರಾಜ್ಯಗಳು ಯಾವುದೇ ಅಭಿವೃದ್ಧಿಯನ್ನು ಹೊಂದದೆ ಬಡತನದಿಂದ ಬಳಲಿತ್ತು. ಈಗ ಮೋದಿಯವರು ಈ ಕೆಟ್ಟ ರಾಜಕೀಯಕ್ಕೆ ಬ್ರೇಕ್ ಹಾಕಿ ತಮ್ಮ ರಾಜಕೀಯ ಶಕ್ತಿಯನ್ನು ತೋರಿಸಲಿದ್ದಾರೆ. ಮುಂಬರುವ ಕೇರಳ, ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿ ಒಡಿಶಾವನ್ನು ಗೆದ್ದಾಗಲಷ್ಟೇ ನಮ್ಮ ಸುವರ್ಣಯುಗ ಆರಂಭವಾಗಲಿದೆ ಎಂದು ತಿಳಿಸಿದರು.
ಬಿಜೆಪಿಯ ಮುಂದಿನ ಟಾರ್ಗೆಟ್ ಕರ್ನಾಟಕ!
* ತ್ರಿಪುರಾ ಗೆಲುವಿನಿಂದ ಬಿಜೆಪಿಗೆ ಮತ್ತಷ್ಟು ಆನೆ ಬಲ
* ಮೋದಿ ಅಲೆ ಒಪ್ಪಿಕೊಂಡಿದ್ದಾರೆ ಅನ್ನೋ ಆತ್ಮ ಬಲ
* ಕಾಂಗ್ರೆಸ್ ಮುಕ್ತ ಭಾರತ ಹೋರಾಟಕ್ಕೆ ಮತ್ತಷ್ಟು ಶಕ್ತಿ
* ತ್ರಿಪುರಾದಲ್ಲಿ ಅನುಸರಿಸಿದ ತಂತ್ರವೇ ಇಲ್ಲೂ ಅನುಕರಣೆ
* 3 ಫಲಿತಾಂಶ ಮುಂದಿಟ್ಟುಕೊಂಡು ಮತಪ್ರಭುಗಳ ಒಲೈಕೆ
* ಬಿಜೆಪಿ ತಂತ್ರಗಾರರನ್ನು ಮತ್ತಷ್ಟು ಯಶಸ್ವಿಯಾಗಿ ಬಳಕೆ
* ರಾಜಕೀಯ ವಿರೋಧಿಗಳನ್ನು ಅಸ್ತ್ರವಾಗಿ ಬಳಕೆ
ಈ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಫಲಿತಾಂಶದಿಂದ ಆಶ್ಚರ್ಯವೇನಿಲ್ಲ, ಜನರು ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕು ಅಂತ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲೂ ಇದೇ ಫಲಿತಾಂಶ ಬರುತ್ತದೆ ಎಂದು ಹೇಳಿದರು.