ನವದೆಹಲಿ: ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ನಿವೃತ್ತ ಶಿಕ್ಷಕನೋರ್ವ ಪತಿ ಮತ್ತು ಸೊಸೆಯನ್ನು ಕೊಲೆ ಮಾಡಿರುವ ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿದೆ.
62 ವರ್ಷದ ನಿವೃತ್ತ ಶಿಕ್ಷಕ ಸತೀಶ್ ಚೌಧರಿ, ಸಿಂಗಪುರದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ತಮ್ಮ ಮಗ ಗೌರವ್ ಚೌಧರಿ ಅವರ ಪತ್ನಿ ಪ್ರಜ್ಞಾ ಚೌಧರಿ (35) ಮತ್ತು ಅವರ ಪತ್ನಿ 62 ವರ್ಷದ ಸ್ನೇಹಲತಾ ಚೌಧರಿ ಅವರನ್ನು ದೆಹಲಿಯ ರೋಹಿಣಿ ನಗರದಲ್ಲಿರುವ ತಮ್ಮ ಮನೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಎಸ್.ಡಿ ಮಿಶ್ರಾ, ನಮಗೆ ಈ ಘಟನೆಯ ಬಗ್ಗೆ ಸತೀಶ್ ಚೌಧರಿ ಅವರ ಎರಡನೇ ಪುತ್ರ ಸೌರಭ್ ಚೌಧರಿ ಮಾಹಿತಿ ನೀಡಿದಾಗ ನಾವು ತಕ್ಷಣ ಸ್ಥಳಕ್ಕೆ ಹೋದೆವು. ಆಗ ದೆಹಲಿ ಸಾರಿಗೆ ನಿಗಮದಲ್ಲಿ ನಿವೃತ್ತ ಉದ್ಯೋಗಿಯಾಗಿರುವ ಪ್ರಜ್ಞಾ ಚೌಧರಿ ಮತ್ತು ಅವರ ಅತ್ತೆ ಸ್ನೇಹಲತಾ ಚೌಧರಿ ಅವರು ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಸುಮಾರು 6 ಗಂಟೆಗೆ ನಮಗೆ ಸೌರಭ್ ಅವರು ಕರೆ ಮಾಡಿದ್ದರು. ಈ ಘಟನೆಯಲ್ಲಿ ಅತ್ತಿಗೆ ಮತ್ತು ತಾಯಿಯ ಪ್ರಾಣ ಉಳಿಸಲು ಹೋದ ಸತೀಶ್ ಅವರ ಎರಡನೇ ಮಗ ಸೌರಭ್ ಚೌಧರಿ ಅವರಿಗೂ ಸಣ್ಣ ಪುಟ್ಟ ಗಾಯಗಳು ಆಗಿವೆ. ಈ ಸಂಬಂಧ ವಿಜಯ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತೀಶ್ ಚೌಧರಿ ಅವರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.