ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಭಾರತವೇ ಲಾಕ್ಡೌನ್ ಆಗಿದೆ. ಹೀಗಾಗಿ ಕೂಲಿ ಕಾರ್ಮಿಕರು ಬೆಂಗಳೂರಿನಿಂದ ಬಳ್ಳಾರಿಗೆ ನಡೆದುಕೊಂಡೇ ಹೊರಟ್ಟಿದ್ದಾರೆ. ಅವರಿಗೆ ಪೊಲೀಸರು ಊಟ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಆದರೆ ಬೆಂಗಳೂರು ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಬಳ್ಳಾರಿಗೆ ವಾಪಸ್ ಹೋಗಲು ಬಸ್ ಇರಲಿಲ್ಲ. ಕೊನೆಗೆ ಪುಟಾಣಿ ಮಕ್ಕಳ ಜೊತೆ ನೆಲಮಂಗಲ ನಗರದ ಮೂಲಕ ಬಳ್ಳಾರಿ ಜಿಲ್ಲೆಯ ಹಳ್ಳಿಗೆ ತಮ್ಮ ಪಯಣ ಬೆಳೆಸಿದ್ದರು. ಆದರೆ ನೆಲಮಂಗಲ ಬಳಿ ಪೊಲೀಸರ ಕೈಗೆ ಸಿಕ್ಕಿದ್ದಾರೆ.
ಎರಡು ದಿನದಿಂದ ತಿನ್ನೋಕೆ ಊಟ ಇಲ್ಲ ಸರ್. ಊರಿಗೆ ಹೋಗೋಣ ಎಂದರೆ ಬಸ್ ಇಲ್ಲ, ಹಣವೂ ಇಲ್ಲ. ಜೊತೆಗೆ ಮಕ್ಕಳು ಭಯ ಭೀತರಾಗಿದ್ದಾರೆ. ನಮ್ಮನ್ನ ತಡಿ ಬೇಡಿ ದಯವಿಟ್ಟು ಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ಜನರ ಕಷ್ಟವನ್ನು ಆಲಿಸಿದ ನೆಲಮಂಗಲ ಟೌನ್ ಪೊಲೀಸರು ಕಾರ್ಮಿರಿಗೆ ಊಟದ ವ್ಯವಸ್ಥೆ ಮಾಡಿಕೊಟ್ಟಿದ್ದರು.
ನೆಲಮಂಗಲ ಕುಣಿಗಲ್ ಬೈಪಾಸ್ ಬಳಿ ಅವರಿಗೆ ಕುಡಿಯಲು ನೀರು ಮತ್ತು ಊಟವನ್ನು ವಿತರಣೆ ಮಾಡಿದ್ದಾರೆ. ಜೊತೆ ಒಟ್ಟಾಗಿ ಹೋಗಬೇಡಿ, ಒಬ್ಬೊಬ್ಬರಾಗಿ ಹೋಗಿ ಎಂದು ಸೂಚನೆ ಕೊಟ್ಟು ಕಳುಹಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮತ್ತು ಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.