ರಾಮನಗರ: ಸಿಎಂ ಸಿದ್ದರಾಮಯ್ಯ ನವರು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದ ನಾಮಫಲಕದ ಕಲ್ಲುಗಳು ಅನಾಥವಾಗಿ ಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದಿದೆ.
ಕಳೆದ ಜನವರಿ 3 ರಂದು ಸಿಎಂ ಸಿದ್ದರಾಮಯ್ಯ ನವರು ಸಾಧನಾ ಸಮಾವೇಶದಲ್ಲಿ ಸುಮಾರು 542 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದರು. ಆದರೆ ಕಾರ್ಯಕ್ರಮ ಮುಗಿದು 6 ದಿನಗಳೇ ಕಳೆದಿದ್ದರೂ ಶಂಕುಸ್ಥಾಪನೆಯ ಫಲಕಗಳನ್ನು ಸಂಬಂಧಿಸಿದ ಅಧಿಕಾರಿಗಳು ತೆಗೆದುಕೊಂಡು ಹೋಗಿಲ್ಲ. ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ್ದ ಫಲಕಗಳನ್ನು ಅಲ್ಲಿಯೇ ಬಿಟ್ಟು ಬೇರೆ ಇಲಾಖೆಯವರು ಫಲಕಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಕ್ರೀಡಾಂಗಣದಲ್ಲಿ ಉಳಿದಿದ್ದ ಎರಡು ಕಲ್ಲು ಗಳಲ್ಲಿ ಒಂದು ಒಡೆದು ಹೋಗಿದ್ದು ಮತ್ತೊಂದು ಅನಾಥವಾಗಿ ಬಿದ್ದಿದೆ. ರಾಜಕೀಯ ಕೆಸರೆರಚಾಟದಲ್ಲಿ ಅನಾಥವಾಗಿ ಹೋಗಿದ್ದ ನಾಮಫಲಕಗಳನ್ನು ತೆಗೆದುಕೊಂಡು ಹೋಗುವಂತೆ ಕಾಲೇಜು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇನ್ನೂ ಅಧಿಕಾರಿಗಳ ತಾತ್ಸಾರದ ನಡೆಗೆ ತಾಲೂಕಿನ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.