ಮುಂಬೈ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ರಾಮನ ಪ್ರಾಣ ಪ್ರತಿಷ್ಠಾಪನೆ (Pran Pratishtha) ದೇಶದೆಲ್ಲೆಡೆ ಸಂಭ್ರಮಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ರಾಮನ ಭಕ್ತರು ತಮ್ಮ ಭಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ತೋರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದೇ ರೀತಿ ನಾಗ್ಪುರದ (Nagpur) ಸಿವಿಲ್ ಎಂಜಿನಿಯರ್ ಒಬ್ಬರು ತಮ್ಮ ಮನೆಯಲ್ಲಿ 11 ಅಡಿ ಎತ್ತರದ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ.
ಸಿವಿಲ್ ಇಂಜಿನಿಯರ್ ಪ್ರಫುಲ್ಲ ಮೇಟಗಾಂವಕರ್ ಎಂಬವರು ತಮ್ಮ ಮನೆಯ ಅಂಗಳದಲ್ಲಿ ರಾಮಮಂದಿರದ ಭವ್ಯವಾದ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಈ ತಿಂಗಳ 22ರಂದು ರಾಮನ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆ ಈ ಪ್ರತಿಕೃತಿ ನಿರ್ಮಿಸಲಾಗಿದೆ. ಪ್ರತಿಯೊಂದು ಮನೆಯಲ್ಲೂ ಇಂತಹ ಒಂದು ಪ್ರತಿಕೃತಿ ಇರಬೇಕು ಎಂದು ನಾನು ಭಾವಿಸುತ್ತೇನೆ. ಇದೇ ಉದ್ದೇಶದಿಂದ ಮಂದಿರದ ಪ್ರತಿಕೃತಿಯನ್ನು ನಾನಿಲ್ಲಿ ನಿರ್ಮಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!
ಅಯೋಧ್ಯೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ, ಪ್ರತಿಕೃತಿಯ ದೇವಾಲಯದಲ್ಲಿ ಭಗವಾನ್ ರಾಮನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಹಿಂದೆ ರಾಮ ಮಂದಿರ ನಿರ್ಮಾಣಕ್ಕಾಗಿ 1990ರಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕರೆ ನೀಡಿದ್ದಾಗ ಅವರ ಪತ್ನಿ ಕರಸೇವಕರಾಗಿ ಭಾಗವಹಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ಕರಸೇವೆಗೆ ಹಾಜರಾಗಿದ್ದಾಗ ತನ್ನ ಪತ್ನಿ 10ನೇ ತರಗತಿಯನ್ನು ಆಗಷ್ಟೇ ಮುಗಿಸಿದ್ದಳು. ಈ ವೇಳೆ ಆಕೆ ಕರಸೇವಕರಾಗಿ ಭಾಗಿಯಾಗಿದ್ದಕ್ಕೆ 16 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದಳು. ನಾನು ಆ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅದೇ ಕಾರಣಕ್ಕೆ ಈ ಪ್ರತಿಕೃತಿ ನಿರ್ಮಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜನವರಿ 22ರ ಮಧ್ಯಾಹ್ನ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ದೇಶದ ಪ್ರಮುಖ ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ