ಬೆಳಗಾವಿ: ಮೈಸೂರು ಘಟನೆಗೆ ಸಮಾಜ ತಲೆ ತಗ್ಗಿಸಬೇಕೇ ಹೊರತು ಸರ್ಕಾರವಲ್ಲ. ಇದು ಸಮಾಜಕ್ಕೆ ಒಳ್ಳೆಯ ಮರ್ಯಾದೆ ತರುವಂತಹ ಘಟನೆ ಅಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ತರಹದ ಘಟನೆ ಆಗಬಾರದಿತ್ತು. ಈ ರೀತಿಯ ಘಟನೆಗಳು ಸಮಾಜದಲ್ಲಿ ಬೇಕಾದಷ್ಟು ಕಡೆ ನಡೆಯುತ್ತಿರುತ್ತೆ. ಆಗಬಾರದಂತಹ ಘಟನೆ ನಡೆದಿದೆ. ಮುಂದೆ ಏನು ಮಾಡಬಹುದು ಎನ್ನುವುದನ್ನು ನಾವು ನೋಡಬೇಕು. ಕುಡಿದ ಅಮಲಿನಲ್ಲಿ ಮಾಡಿರುವಂತದ್ದು ಎಂದು ಪೊಲೀಸರು ವರದಿ ಮಾಡಿದ್ದಾರೆ. ಸಮಾಜಕ್ಕೆ ಒಳ್ಳೆಯ ಮರ್ಯಾದೆ ತರುವಂತಹ ಘಟನೆ ಇದಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ ಸಾವು
ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ನಾಯಕರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಇಂತಹ ಘಟನೆ ಯಾರದ್ದೇ ಸರ್ಕಾರದಲ್ಲಾದರೂ ಸಮಾಜ ತಲೆತಗ್ಗಿಸಬೇಕೇ ಹೊರತು ಸರ್ಕಾರವಲ್ಲ. ಇದನ್ನು ರಾಜಕೀಯ ಸಮಸ್ಯೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗ್ಯಾಂಗ್ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು!
ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ನಾನು ನೋಡಿಲ್ಲ. ಆ ಹೇಳಿಕೆ ನೋಡಿ ನಾನು ಮಾತನಾಡುತ್ತೇನೆ. ಮೈಸೂರಿಗೆ ಹೋದಾಗ ಶೋಷಣೆಯಾದ ಹುಡುಗಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವೆ ಎಂದು ತಿಳಿಸಿದರು.