ನನ್ನ ಬೇಡಿಕೆ ಈಡೇರಿಸುವವರು ಅಮೆರಿಕದಲ್ಲಿದ್ದಾರೆ – ಆನಂದ್ ಸಿಂಗ್

1 Min Read

ಬೆಂಗಳೂರು: ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಅವರು ಕಾಂಗ್ರೆಸ್ ನಾಯಕರ ಮೇಲೆ ವಿಶ್ವಾಸ ಕಳೆದುಕೊಂಡ್ರಾ ಅಥವಾ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮೇಲೆ ನಂಬಿಕೆ ಇಲ್ವಾ ಎನ್ನುವ ಅನುಮಾನ ಎದ್ದಿದೆ. ಯಾಕೆಂದರೆ ನನ್ನ ಸಮಸ್ಯೆ ಬಗೆಹರಿಸುವವರು ಅಮೆರಿಕದಲ್ಲಿ ಇದ್ದಾರೆ ಎಂದು ಸ್ವತಃ ಆನಂದ್ ಸಿಂಗ್ ಅವರೇ ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಅಮೆರಿಕದಿಂದ ಸಿಎಂ ಬಂದ ನಂತರವಷ್ಟೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನನ್ನು ಎಲ್ಲರೂ ದೂರವಾಣಿಯಲ್ಲಿ ಸಂಪರ್ಕಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ನಾನು ಸಿಎಂ ಬಳಿ ಮಾತ್ರ ಮಾತನಾಡುತ್ತೇನೆ. ಅವರು ನನ್ನ ಬೇಡಿಕೆ ಈಡೇರಿಸಿದರೆ ಮಾತ್ರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸದ್ಯ ನಾನು ಇಲ್ಲಿಂದ ನೆರವಾಗಿ ಹೊಸಪೇಟೆಗೆ ಹೋಗುತ್ತೇನೆ. ನಾನು ಯಾರನ್ನು ಭೇಟಿ ಮಾಡಲ್ಲ. ಫೋನಿನಲ್ಲಿ ಎಲ್ಲರ ಬಳಿ ಮಾತಾಡಿದ್ದೇನೆ. ನನ್ನ ಬೇಡಿಕೆಗೆ ಸ್ಪಂದಿಸುವ ವ್ಯಕ್ತಿ ಅಮೆರಿಕದಲ್ಲಿ ಇದ್ದಾರೆ. ಅವರು ಬರಲಿ ಅಲ್ಲಿಯವರೆಗೂ ಯಾರ ಬಳಿ ಮಾತುಕತೆ ಇಲ್ಲ ಎಂದು ಹೇಳಿದ್ದಾರೆ.

ಬೇಡಿಕೆಗಳನ್ನು ಇಟ್ಟಿದ್ದೇನೆ. ಆದರೆ ನಾನೇನು ಮಂತ್ರಿಗಿರಿ ಕೊಡಿ ಎನ್ನುವ ಬೇಡಿಕೆ ಇಟ್ಟಿಲ್ಲ. ಜನರ ಬೇಡಿಕೆಯನ್ನು ಅವರ ಮುಂದೆ ಇಟ್ಟಿದ್ದೇನೆ. ನನ್ನ ರಾಜೀನಾಮೆ ಬಗ್ಗೆ ನನ್ನ ಆಯ್ಕೆ ಮಾಡಿದ ಜನರ ಬಳಿಯೂ ಮಾತಾಡಿದ್ದೇನೆ. ಅದನ್ನು ಜನ ಒಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಇತ್ತ ಬಂಡಾಯವೆದ್ದಿರುವ ಆನಂದ್‍ಸಿಂಗ್ ವಿರುದ್ಧ ಕಾಂಗ್ರೆಸ್ ಸಮರ ಸಾರಿದ್ದು, ರಾಜೀನಾಮೆ ಸ್ವೀಕರಿಸದಂತೆ ಸ್ಪೀಕರ್‍ಗೂ ದೂರು ಕೊಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *