ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಲೋಕಸಭಾ ಚುನಾವಣೆ ದಿನ ಕಳೆದಂತೆ ರೋಚಕತೆ ಪಡೆದುಕೊಳ್ಳುತ್ತಿದೆ. ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಎದ್ದಿರುವ ಪ್ರಶ್ನೆ ಸಂಸದೆ ಸುಮಲತಾ ಅಂಬರೀಶ್ (Sumalatha) ಮಂಡ್ಯಕ್ಕೆ ಯಾಕೆ ಬರ್ತಾ ಇಲ್ಲ ಎಂಬುದು.
ಮಂಡ್ಯ ಕ್ಷೇತ್ರದಲ್ಲಿ ಒಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ‘ಕೈ’ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಸಂಸದೆ ಸುಮಲತಾ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪರ ಯಾಕೆ ಪ್ರಚಾರಕ್ಕೆ ಬಂದಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ. ಸದ್ಯ ಸುಮಲತಾ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡು ಮಂಡ್ಯ ಹೊರತುಪಡಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಾಜಿ ಮೇಯರ್ ಮನೆಯಲ್ಲಿ 1.29 ಕೋಟಿ ರೂ. ಮೌಲ್ಯದ ವಸ್ತುಗಳ ಕಳ್ಳತನ
2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಸುಮಲತಾ ಎದುರಾಳಿಗಳಾಗಿದ್ದರು. ಆದರೆ ಸದ್ಯ ಇವರಿಬ್ಬರು ಇಂದು ಒಂದೇ ದೋಣಿಯ ನಾವಿಕರಾಗಿದ್ದಾರೆ. ಹೀಗಿರುವಾಗ ಮಂಡ್ಯ ಸಂಸದರಾಗಿರುವ ಸುಮಲತಾ, ಕುಮಾರಸ್ವಾಮಿ ಪರ ಪ್ರಚಾರಕ್ಕೆ ಬರಬೇಕಿತ್ತು. ಆದರೆ ಇದುವರೆಗೆ ಮಂಡ್ಯದಲ್ಲಿ ಸುಮಲತಾ ಪ್ರಚಾರ ನಡೆಸುವ ಸುಳಿವು ಇನ್ನೂ ಸಿಕ್ಕಿಯೇ ಇಲ್ಲ. ಇನ್ನೊಂದೆಡೆ ಕಳೆದ ಬಾರಿ ಸುಮಲತಾ ಪರ ಪ್ರಚಾರ ನಡೆಸಿದ್ದ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡುತ್ತಿದ್ದಾರೆ. ಇದು ಸುಮಲತಾ ಬೆಂಬಲಿಗರು ಹಾಗೂ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಇನ್ನೂ ಮೈಸೂರಿನ ಮೋದಿ ಸಮಾವೇಶದಲ್ಲೂ ಸುಮಲತಾ ತಮ್ಮ ಭಾಷಣದಲ್ಲಿ ಕುಮಾರಸ್ವಾಮಿ ಹೆಸರು ಹೇಳದೇ ಭಾಷಣ ಮುಗಿಸಿದ್ದಾರೆ.
ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಸುಮಲತಾ ಅವರು ಯಾಕೆ ಪ್ರಚಾರಕ್ಕೆ ಬರ್ತಾ ಇಲ್ಲ ಎಂದು ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಸುಮಲತಾ ಸ್ಪಷ್ಟನೆ ನೀಡಿದ್ದಾರೆ. ಪಕ್ಷ ಏನು ಸೂಚನೆ ನೀಡುತ್ತೆ ಅದನ್ನು ನಾನು ಮಾಡ್ತೀನಿ. ದರ್ಶನ್ ಪ್ರಚಾರ ಮಾಡುತ್ತಾ ಇರೋದು ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ. ಇದನ್ನೂ ಓದಿ: ಏನು ಅಕ್ಷಯ ಪಾತ್ರೆ ಅಂತಾ ಹೆಚ್ಡಿಡಿ ಬಿಡಿಸಿ ಹೇಳಲಿ: ಡಿಕೆಶಿ ತಿರುಗೇಟು
ಕುಮಾರಸ್ವಾಮಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ನಾಯಕರು ಸೂಚನೆ ನೀಡಿರುವ ಕಡೆ ಸುಮಲತಾ ಪ್ರಚಾರ ಮಾಡ್ತಾ ಇದ್ದಾರೆ. ಇನ್ನೂ ನಾಲ್ಕು ದಿನ ಬಾಕಿ ಇದ್ದು, ಬಿಜೆಪಿ ನಾಯಕರು ಹೇಳಿದ್ರೆ ಮಂಡ್ಯದಲ್ಲೂ ಸುಮಲತಾ ಪ್ರಚಾರಕ್ಕೆ ಬರಬಹುದು ಎಂದಿದ್ದಾರೆ.