ಮುಂಬೈ: ಹಿಂದಿ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಮಧುರ್ ಭಂಡಾರ್ಕರ್ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ರೂಪದರ್ಶಿ ಪ್ರೀತಿ ಜೈನ್ಗೆ ಇಲ್ಲಿನ ನ್ಯಾಯಲಯ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ.
ಪ್ರೀತಿ ಜೈನ್ ಜೊತೆ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ ನರೇಶ್ ಪರ್ದೇಶಿ ಮತ್ತು ಶಿವರಾಮ್ ದಾಸ್ಗೂ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಏನಿದು ಪ್ರಕರಣ?: ನಿರ್ದೇಶಕ ಭಂಡಾರ್ಕರ್ ಅವರನ್ನು ಕೊಲ್ಲಲು ರೂಪದರ್ಶಿ ಪ್ರೀತಿ 2005ರ ಸೆಪ್ಟೆಂಬರ್ನಲ್ಲಿ ಅಂಡರ್ ವಲ್ರ್ಡ್ ಡಾನ್ ಆಗಿದ್ದ ಅರುಣ್ ಗಾವ್ಲಿಯ ಸಹಚರ ನರೇಶ್ ಪರ್ದೇಶಿಗೆ 75,000 ರೂ. ಸುಪಾರಿ ನೀಡಿದ್ದಳು. ಆದ್ರೆ ನರೇಶ್ ತನ್ನ ಕೆಲಸವನ್ನು ಮಾಡಿ ಮುಗಿಸದ ಕಾರಣಕ್ಕೆ ಪ್ರೀತಿ ಜೈನ್ ಆತನಿಗೆ ತಾನು ಕೊಟ್ಟಿದ್ದ 75,000 ರೂ.ಗಳನ್ನು ವಾಪಸ್ ಕೊಡಲು ಕೇಳಿದ್ದಳು. ಈ ಬಗ್ಗೆ ಅರುಣ್ ಗಾವ್ಲಿಯ ಮತ್ತೊಬ್ಬ ಸಹಚರ ವಕೀಲ ಬಗಾವೆಗೆ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದಕ್ಕೂ ಮೊದಲು ಜೈನ್, ಭಂಡಾರ್ಕರ್ ಅವರು ಸಿನಿಮಾದಲ್ಲಿ ಪಾತ್ರ ಕೊಡುವುದಾಗಿ ಹೇಳಿ 1999 ರಿಂದ 2004ರ ಅವಧಿಯ ವೇಳೆ ನನ್ನ ಮೇಲೆ 16ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ 2004ರ ಜುಲೈನಲ್ಲಿ ದೂರು ದಾಖಲಿಸಿದ್ದಳು. ಭಂಡಾರ್ಕರ್ ನನಗೆ ವಂಚಿಸಿದ್ದಾರೆ. ಅವರನ್ನು ಬಂಧಿಸಿ ಎಂದು ಒತ್ತಾಯಿಸಿದ್ದಳು. ಬಳಿಕ ತನ್ನ ಆರೋಪವನ್ನು ಕೈಬಿಡುತ್ತಿದ್ದೇನೆ ಎಂದು ಹೇಳಿದಾಗ ಕೋರ್ಟ್ ಭಂಡಾರ್ಕರ್ ವಿರದ್ಧದ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡಿತ್ತು.
Somethings are better left unsaid! Somethings are better left as they are. Life moves on, so have I.
— Madhur Bhandarkar (@imbhandarkar) April 28, 2017