ದಾವಣಗೆರೆ: ನಿಮ್ಮ ಹೊಟ್ಟೆ ಇನ್ನೂ ಕಡಿಮೆಯಾಗಿಲ್ಲವಲ್ರಿ, ಬಡವರ ದುಡ್ಡು ತಿನ್ನುವುದು ಬಿಟ್ಟು ಇನ್ನಾದರೂ ಸರಿಯಾಗಿ ಕೆಲಸ ಮಾಡಿ, ತಿಮಿಂಗಿಲ ರೀತಿ ವರ್ತಿಸಬೇಡಿ ಎಂದು ಸ್ಲಂ ಬೋರ್ಡ್ ಸಿಇಒ ಕಪಿನಿ ಗೌಡಗೆ ವಸತಿ ಸಚಿವ ವಿ.ಸೋಮಣ್ಣ ತರಾಟೆ ತೆಗೆದುಕೊಂಡಿದ್ದಾರೆ.
ಜಿಲ್ಲಾಡಳಿತ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರನ್ನು ಯಾವತ್ತಾದ್ರೂ ಭೇಟಿ ಮಾಡಿದ್ದೀರಿರೇನ್ರಿ ಎಂದು ಪ್ರಶ್ನಿಸಿದ್ದಾರೆ. ಆಗ ಸಭೆಗೆ ಬಂದಾಗ ಮಾತ್ರ ಸರ್ ಎಂದು ಕಪಿನಿ ಗೌಡ ಹೇಳಿದ್ದಾರೆ. ಅಷ್ಟಕ್ಕೆ ಸಿಟ್ಟಿಗೆದ್ದ ಸಚಿವ ವಿ.ಸೋಮಣ್ಣ, ನಿಮಗೊಂದು ಗೂಟದ ಕಾರು ಎಲ್ಲ ವ್ಯವಸ್ಥೆ, ಅದಕ್ಕೆ ಜಿಪಿಎಸ್ ಹಾಕಿಸಬೇಕಿದೆ. ಇನ್ನೋವಾ ಕಾರು ಐಎಎಸ್ ಅಧಿಕಾರಿಗಳಿಗೆ ನೀಡುವ ಕಾರು. ಅಂತಹ ಕಾರಲ್ಲಿ ನೀವು ಓಡಾಡುತ್ತಿದ್ದೀರಿ. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಬಡವರಿಗೆ ಸರಿಯಾಗಿ ಮನೆ ಹಾಕಿಕೊಡಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್
ಅಲ್ಲದೆ ಇವರೊಬ್ಬರು, ಇನ್ನೊಬ್ಬ ಪದ್ಮನಾಭ ಅಂತ ಮೈಸೂರಲ್ಲಿ ಇದ್ದರು. ದೊಡ್ಡ ತಿಮಿಂಗಲ ಇವರು. ನ್ಯಾಷನಲ್ ಅಲ್ಲ, ಇಂಟರ್ನ್ಯಾಷನಲ್ ಲೆವೆಲ್ ಇವರು. 55 ವರ್ಷ ಆಯಿತು, ದೇವರಾಜ ಅರಸು ಅವರು ಬಡವರಿಗಾಗಿ ಇಂತಹ ಯೋಜನೆ ತಂದಿದ್ದಾರೆ. ಆದರೆ ಇವರು ಬಡಿದು ತಿಂದು, ತಿಂದು ಕೊಬ್ಬಿದ್ದಾರೆ. ಈಗ ಸಚಿವರಿಗೇ ಇವರು ಬಗ್ಗುತ್ತಿಲ್ಲ. ಇನ್ಯಾರಿಗೆ ಬಗ್ಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ನನಗೆ ಯಾವ್ಯಾವ ವಿಧಾನಸಭಾ ಕ್ಷೇತ್ರದಲ್ಲಿ ಏನೇನಾಗಿದೆ ಅಂಕಿ ಅಂಶ ಬೇಕು. ಸಾಕು ತಿಂದಿದ್ದು, ಇನ್ನೂ ಎಷ್ಟು ಲಂಚ ತಿನ್ನುತ್ತೀರಿ. ಕೊರೊನಾ ಬಂದು ಎಲ್ಲವೂ ಅಲ್ಲೋಲಕಲ್ಲೋಲವಾಗಿದೆ. ಇನ್ನಾದರೂ ಬಡವರ ಕೆಲಸ ಮಾಡಿಕೊಡಿ, ಈ ರೀತಿ ಮಾಡುವುದು ಗೌರ ಅಲ್ಲ. ಇನ್ನಾದರೂ ಸರಿಯಾಗಿ ಕೆಲಸ ಮಾಡ್ರಯ್ಯ, ಯಾಕ್ರಯ್ಯ ಹೀಗೆ ಮಾಡ್ತಿರಾ? ದಾವಣಗೆರೆ ಜಿಲ್ಲೆಯಲ್ಲಾದ್ರೂ ಉತ್ತಮವಾಗಿ ಕೆಲಸ ಮಾಡಿ ಎಂದು ಕೇಳಿದ್ದಾರೆ. 1008 ಜನ ಅರ್ಜಿ ಹಾಕಿದ್ದಾರೆ ಎಲ್ಲರೂ ಸೆಲೆಕ್ಟ್ ಆಗಬೇಕು. ಶ್ರೀಮಂತರು ಅರ್ಜಿ ಹಾಕಿದ್ದರೆ ಅಂತಹವನ್ನು ರದ್ದು ಮಾಡಿ, ಬಡವರಿಗೆ ಅನ್ಯಾಯ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.