ಧಾರವಾಡ: ಯಾವುದೇ ಹತ್ಯೆಯಾದಾಗ ನಾವು ಆ ವ್ಯಕ್ತಿಯ ಹಿನ್ನೆಲೆಗಳನ್ನು ಅರಿಯಬೇಕು. ಇಲಿಯಾಸ್ ಕಾಂಗ್ರೆಸ್ ಕಾರ್ಯಕರ್ತ ಆಗಿದ್ದ. ನಮಗೆ ಎಲ್ಲರೂ ಕೂಡ ಸಹಚರರೇ. ಆದ್ರೆ ಯಾರೇ ತಪ್ಪು ಮಾಡಿದ್ರು ನಾವು ಸಹಿಸೊಲ್ಲ ಅಂತ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಟಾರ್ಗೆಟ್ ಗ್ರೂಪ್ ರೂವಾರಿ, ಕಾಂಗ್ರೆಸ್ ಕಾರ್ಯಕರ್ತ ಇಲಿಯಾಸ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಾರ್ಗೆಟ್ ಗ್ರೂಪ್ ಏನು ಮಾಡ್ತಾ ಇತ್ತು ಅನ್ನೋದರ ಬಗ್ಗೆ ತನಿಖೆಯಾಗಬೇಕಿದೆ. ಯಾರೆಲ್ಲ ಕೊಲೆಯಲ್ಲಿ ಭಾಗಿಯಾಗ್ತಾರೆ? ಅಶಾಂತಿ ಸೃಷ್ಟಿಸ್ತಾರೆ? ಅವೆಲ್ಲ ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ. ಅಂತಹ ಸಂಘಟನೆಗಳು ಕೇಂದ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುತ್ತವೆ. ಹೀಗಾಗಿ ಕೇಂದ್ರ ಸರ್ಕಾರವೇ ಅಂತಹ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಅಂತ ಹೇಳಿದ್ರು. ಇದನ್ನೂ ಓದಿ: ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ
ಕೆಲ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ಕೇಳುವ ಬಿಜೆಪಿಯವರು ತಮ್ಮದೇ ಕೇಂದ್ರ ಸರ್ಕಾರದ ಮೂಲಕ ಬ್ಯಾನ್ ಮಾಡಿಸಲಿ. ರಾಜ್ಯ ಸರ್ಕಾರ ನಮ್ಮ ರಾಜ್ಯದಲ್ಲಿ ಬ್ಯಾನ್ ಮಾಡಿದ್ರೆ ಅವರು ಬೇರೆ ಬೇರೆ ರಾಜ್ಯದಲ್ಲಿ ಕುಳಿತು ಕಾರ್ಯನಿರ್ವಹಿಸಬಹುದು. ಹಾಗಾಗಿ ಅಂತಹ ಸಂಘಟನೆಗಳನ್ನು ಕೇಂದ್ರ ಸರ್ಕಾರವೇ ಗುರುತಿಸಬೇಕು. ಮಂಗಳೂರಿನಲ್ಲಿ ಕೆಲ ಹತ್ಯೆಗಳಾದಾಗ ಅದನ್ನು ಇನ್ನಷ್ಟು ಗೊಂದಲ ಮಾಡಿ ದಂಗೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರಿಗೆ ತನಿಖೆ ಮಾಡಲು ಬಿಡದಂತೆ ಗಲಾಟೆಗಳನ್ನು ಸೃಷ್ಟಿಸುತ್ತಾ ಇದ್ದಾರೆ ಅಂದ್ರು. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್
ಮಂಗಳೂರಿನಲ್ಲಿ ಕೆಲವರು ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ರೂ ಮಂಗಳೂರು ಜನ ಸಹಬಾಳ್ವೆ ಬಿಡಲಿಲ್ಲ. ದೀಪಕ್ ಹತ್ಯೆ ಮಾಡಿದವರು ಸುಪಾರಿ ಕಿಲ್ಲರ್ ಅಂತ ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಕುರಿತು ಪೊಲೀಸರೇ ಹೆಚ್ಚಿನ ತನಿಖೆ ಮಾಡಬೇಕು. ಬಿಜೆಪಿಯವರು ಒಬ್ಬೊಬ್ಬರೂ ಒಂದೊಂದು ಕಡೆ ಬೆಂಕಿ ಹಾಕುತ್ತೀವಿ ಅಂತ ಹೇಳಿಕೊಳ್ತಾ ಹೋಗುತ್ತಿದ್ದಾರೆ. ಒಬ್ಬರು ಮೈಸೂರು, ಇನ್ನೊಬ್ಬರು ಮಂಗಳೂರು, ಮತ್ತೊಬ್ಬರು ಇನ್ನೆಲ್ಲೋ ಬೆಂಕಿ ಹಾಕುತ್ತೇವೆ ಅಂದ್ರೆ ರಾಜ್ಯಾಧ್ಯಕ್ಷರು ಇಡೀ ರಾಜ್ಯಕ್ಕೆ ಬೆಂಕಿ ಹಾಕ್ತೇನೆ ಅಂತ ಹೊರಟಿದ್ದಾರೆ ಅಂದ್ರು.