ಬೆಳಗಾವಿ: ಮದುವೆ ಸಮಾರಂಭದಲ್ಲಿ ಕನ್ನಡ ಹಾಡನ್ನು ಹಾಕಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದ ಘಟನೆ ದಾಮಣೆ ಗ್ರಾಮದಲ್ಲಿ ನಡೆದಿತ್ತು. ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಪ್ರಕರಣದ ಸಂಬಂಧ ಹತ್ತು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ನಿನ್ನೆ ರಾತ್ರಿ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಮದುವೆ ಸಮಾರಂಭದಲ್ಲಿ ಕೆಲ ಕಿಡಗೇಡಿಗಳು ಗಲಾಟೆ ಮಾಡಿದ್ದಾರೆ. ಗಲಾಟೆಗೆ ಕಾರಣ ಏನು ಅನ್ನೋದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ
ಈ ಇಬ್ಬರ ನಡುವೆ ಈ ಹಿಂದೆ ಎನಾದ್ರೂ ದ್ವೇಷ ಇತ್ತಾ ಎಂಬ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಆರು ತಿಂಗಳ ಹಿಂದೆ ಬೈಕ್ ಸುಟ್ಟಿದ್ದರೆಂಬ ಮಾಹಿತಿ ನೀಡಿದ್ದಾರೆ. ಈ ಕುರಿತಂತೆಯೂ ಕೂಡ ತನಿಖೆ ಮಾಡಲಾಗುತ್ತದೆ. ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಗ್ರಾಮದಲ್ಲಿ ಮಚ್ಚು, ಲಾಂಗ್ ಹಿಡಿದುಕೊಂಡು ಓಡಾಡ್ತಾರೆ ಎಂಬ ಆರೋಪ ಇದೆ. ಆ ರೀತಿ ಎನಾದ್ರೂ ಕಂಡು ಬಂದ್ರೆ ಅಂಥವರನ್ನು ವಶಕ್ಕೆ ಪಡೆಯುತ್ತೇವೆ. ಈಗಾಗಲೇ ಘಟನಾ ಸ್ಥಳದಲ್ಲಿ ಒಂದು ಸಿಎಆರ್ ತುಕಡಿ ನಿಯೋಜಿಸಿ ಬಿಗಿ ಭದ್ರತೆ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಏನಿದು ಘಟನೆ?
ಗುರುವಾರ ಬೆಳಗಾವಿ ತಾಲೂಕಿನ ದಾಣಮೆ ಗ್ರಾಮದಲ್ಲಿ ಸೈಬಣ್ಣವರ್ ಅವರ ಮನೆಯಲ್ಲಿ ಮದುವೆ ಸಮಾರಂಭವಿದ್ದ ಹಿನ್ನೆಲೆ ರಾತ್ರಿ ಬ್ಯಾಂಡ್ ಸೆಟ್ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕರೆದೊಯ್ಯುಲಾಗುತ್ತಿತ್ತು. ಈ ವೇಳೆ ಮದುವೆ ಸಮಾವೇಶದಲ್ಲಿ ಕನ್ನಡ ಧ್ವಜ ಹಿಡಿದು ‘ಕರುನಾಡೇ’ ಹಾಡಿಗೆ ಯುವಕರು ಕುಣಿದು ಕುಪ್ಪಳಿಸುತ್ತಿದ್ದರು. ಆಗ ಎಂಇಎಸ್ ಗೂಂಡಾಗಳಾದ ಅಜಯ್ ಯಳ್ಳೂರಕರ್, ಆಕಾಶ್ ಸೇರಿ ಎಂಟತ್ತು ಯುವಕರ ತಂಡವೊಂದು ಆಗಮಿಸಿ ಕನ್ನಡ ಹಾಡನ್ನು ಹಾಕದಂತೆ ಎಚ್ಚರಿಕೆ ನೀಡಿ ಗಲಾಟೆ ಪ್ರಾರಂಭಿಸಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದ ವಿಕೋಪಕ್ಕೆ ಹೋಗಿ ಎಂಇಎಸ್ ಪುಂಡರು ವಧು-ವರ ಸೇರಿ ಆತನ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಠಾಣೆಗೆ ಕುಟುಂಬಸ್ಥರ ದೂರು ನೀಡಿದ್ದರು. ಇದನ್ನೂ ಓದಿ: ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು