ಬೆಂಗಳೂರು: ಮಾರ್ಚ್ 13, 14 ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಇದೆ. ಅಷ್ಟರಲ್ಲಿ ನಾವು ಸರ್ಕಾರಿ ಕಾರ್ಯಕ್ರಮ ಮಾಡಬೇಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಕೆಂಗೇರಿಯ ಸೂಲಿಕೆರೆ ಗ್ರಾಮದ ಮೈದಾನದಲ್ಲಿ ನೂತನವಾಗಿ ಆಯ್ಕೆಯಾದ ಎಂಎಲ್ ಸಿ ಪುಟ್ಟಣ್ಣ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಟೈಮ್ ಇಲ್ಲ, ಕೇಂದ್ರ ಸರ್ಕಾರದವರು ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿ: ಪುಟ್ಟಣ್ಣ ಕರೆದಿದ್ದಕ್ಕೆ ಬಂದಿದ್ದಾರೆ, ಇದು ನಿಮ್ಮ ಗೆಲುವು ಪುಟ್ಟಣ್ಣ ಗೆಲುವು ಅಲ್ಲ. ಎರಡು ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಕ್ಕೆ ಸೋಲಿಸಿದ್ದೀರಿ. ಅದಕ್ಕೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇವೆ. ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ಹಿಂದೆ ನಮ್ಮ ಮೇಷ್ಟ್ರು ಒಂದು ಮಾತು ಹೇಳ್ತಿದ್ರು ಎಂದು ತ್ರೇತಾಯುಗ, ದ್ವಾಪುರಯುಗದ ಕತೆ ಹೇಳಿದರು. ಬೆಂಗಳೂರು ನಗರದ ಎಲ್ಲ ಸಂಸರನ್ನು ಗೆಲ್ಲಿಸಬೇಕಿದೆ. ಪದವೀಧರರ ಕ್ಷೇತ್ರಗಳನ್ನೂ ನಾವು ಗೆಲ್ಲಬೇಕು. ಅದಕ್ಕೆ ನೀವೆಲ್ಲ ಸಹಕಾರ ಕೊಡ್ಬೇಕು. ನೀವು ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಆಗಬಹುದು. ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಅನ್ ಕಂಡೀಷನ್ ಆಗಿ ಸಿಎಂ ಆಗಿ ಕುಮಾರಸ್ವಾಮಿ ಮಾಡ್ಬೇಕು ಅಂತಾ ಮಾಡಿದ್ವಿ. ಆಗ ಸಿಎಂ ಸ್ಥಾನದಿಂದ ಯೋಗೇಶ, ಮುನಿರತ್ನ ಎಲ್ಲರೂ ಇಳಿಸಿದ್ರು ಎಂದರು.
ಈಗ ಅವರ ಜೊತೆಗೆ ಹೋಗಿದ್ದಾರೆ. ನಾಚಿಕೆ ಆಗ್ಬೇಕು ಇವರಿಗೆ, ರಾಜ್ಯಸಭೆಯಲ್ಲೂ ಶಿವಶಂಕರಪ್ಪಗೂ ಫೋನ್ ಮಾಡಿದ್ರಂತೆ. ಹಣ ಬೇಕಾ ಅಂತ ಕಾಲ್ ಮಾಡಿದ್ರಂತೆ. ಯಡಿಯೂರಪ್ಪ, ಕುಮಾರಸ್ವಾಮಿ ಫೋನ್ ಮಾಡಿದ್ರಂತೆ. ನೀವು ತಿರುಕನ ಕನಸು ಕಾಣುತ್ತಿದ್ದೀರಾ. ನಾವು 136+2 ಇದ್ದೀವಿ ಅಲ್ದೇ ಜನಾರ್ದನ ರೆಡ್ಡಿ ಎಲ್ಲಾ ಸೇರಿ 140 ಆಗ್ತೀವಿ. ನೀವು ಏನು ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದರು.
ಲೋಕಸಭೆ ನಿಮ್ಮ ಜವಾಬ್ದಾರಿ. ಡಿ.ಕೆ.ಸುರೇಶ್ ಕೂಡ ಇಲ್ಲೇ ಇದ್ದಾರೆ. ಪಂಚಾಯತ್ ಮೆಂಬರ್ ರೀತಿ ಕೆಲಸ ಮಾಡ್ತಿದ್ದಾರೆ. ತೆರಿಗೆ ನಮ್ಮ ಹಕ್ಕು ಇದನ್ನ ಕೇಳಿದ್ದಕ್ಕೆ ಮೋದಿ, ಸೀತಾರಂ ಎಲ್ಲರೂ ಮಾತಾಡುತ್ತಾರೆ. ನಾಳೆ ಬಿಜೆಪಿಯವರು ಬರಗಾಲದ ವಿರುದ್ಧ ಹೋರಾಟ ಮಾಡ್ತಿದ್ದಾರಂತೆ. ಮೇಕೇದಾಟು, ಕೃಷ್ಣಾ, ಕಳಸ ಬಂಡೂರಿಗೆ ಕ್ಲಿಯರೆನ್ಸ್ ಯಾಕೆ ಕೊಡ್ತಿಲ್ಲ?. ಇದನ್ನ ಕೊಡೋಕೆ ಆಗಲ್ಲ, ಈಗ ರಾಜಕಾರಣ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ ಮನವಿ: ಇದಕ್ಕೂ ಮುನ್ನ ವೇದಿಕೆಗೆ ಮುಂಭಾಗದಲ್ಲಿ ನೆರೆದಿದ್ದ ಶಿಕ್ಷಕರಿಗೆ ಎಲ್ಲ ಕುಳಿತುಕೊಳ್ಳಿ ಎಂದು ಡಿಕೆಶಿ ಮನವಿ ಮಾಡಿದರು. ಕುಳಿತ್ಕೊಳ್ರಯ್ಯ.. ನಾವು ಚೇರಿಗೋಸ್ಕರ ಬಡಿದಾಡ್ತಾದ್ದೀವಿ, ನೀವು ಚೇರ್ ಖಾಲಿ ಇದ್ರೂ ಕುಳಿತುಕೊಳ್ಳದೇ ಇದ್ದೀರಲ್ಲಾ. ಹೋಗಿ ಕುಳಿತುಕೊಳ್ಳಿ ಎಂದು ಹೇಳಿದರು.
ತಮಾಷೆ ಮಾಡಿ ಗರಂ ಆದ ಡಿಕೆಶಿ: ನಾನೂ ಊಟಕ್ಕೆ ಬಂದಿದ್ದೀನಿ, ಇನ್ನೂ ಊಟಕ್ಕೆ ಟೈಂ ಆಗಿಲ್ಲ. ನಾನು ಮರಿ ಊಟಕ್ಕೆ ಬಂದಿದ್ದೇನೆ ಎಂದು ತಮ್ಮ ಭಾಷಣ ಆರಂಭದಲ್ಲಿ ಡಿಕೆಶಿ ತಮಾಷೆಯ ಮಾತುಗಳನ್ನಾಡಿದರು. ಭಾಷಣದ ವೇಳೆ ಸಿಎಂಗೆ ಹಾರ ಹಾಕಲು ಬಂದ ವ್ಯಕ್ತಿ ವಿರುದ್ಧ ಗರಂ ಆದ ಡಿಸಿಎಂ, ಏಯ್ ಆ ಕಡೆ ನಡಿ ಎಂದು ವೇದಿಕೆಯಿಂದ ನಿರ್ಗಮಿಸಲು ಸೂಚಿಸಿದ ಪ್ರಸಂಗವೂ ನಡೆಯಿತು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ ಭಾಗಿಯಾಗಿದ್ದಾರೆ.