ಮಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಂಗಳೂರಿನಲ್ಲಿರುವಾಗಲೇ (Mangaluru) ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು (Bomb blast) ಉಗ್ರರು ಸಂಚು ರೂಪಿಸಿದ್ದ ವಿಚಾರ ಈಗ ಬಯಲಾಗಿದೆ.
ಹೌದು. ಪಂಪ್ವೆಲ್ ವೃತ್ತದ ಬಳಿ ಈ ಕುಕ್ಕರ್ ಬಾಂಬ್ ಸ್ಫೋಟಿಸಲು (Cooker Blast) ಸಂಚು ರೂಪಿಸಲಾಗಿತ್ತು ಎಂಬ ಅನುಮಾನ ಎದ್ದಿದೆ.
ಪಂಪ್ವೆಲ್ ಬಳಿ ಜನ ಸಂಚಾರ ಜಾಸ್ತಿ ಇರುತ್ತದೆ. ಕೇರಳಕ್ಕೆ ಹೋಗುವ ವಾಹನಗಳು ಈ ರಸ್ತೆಯ ಮೂಲಕ ಸಾಗುತ್ತದೆ. ಅಷ್ಟೇ ಅಲ್ಲದೇ ಹಾಸನ, ಪುತ್ತೂರು ಇತ್ಯಾದಿ ಕಡೆಗೆ ಹೋಗುವ ವಾಹನಗಳು ಇಲ್ಲೇ ಸಾಗುತ್ತದೆ. ಈ ಕಾರಣಕ್ಕೆ ಇಲ್ಲಿ ಸ್ಫೋಟಿಸಲು ಸಂಚು ರೂಪಿಸಲಾಗಿತ್ತು ಎಂಬ ಅನುಮಾನ ಎದ್ದಿದೆ.
ಟೈಮ್ ಬಾಂಬ್:
ಬ್ಯಾಟರಿ, ವಯರ್, ನಟ್, ಬೋಲ್ಟ್, ಸರ್ಕ್ಯೂಟ್ ರೀತಿಯ ವಸ್ತುಗಳು ಕುಕ್ಕರ್ನಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಇದೊಂದು ಟೈಮರ್ ಬಾಂಬ್ ಎನ್ನವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಟೈಮರ್ ಸೆಟ್ ಮಾಡಿ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ ಯಾವುದೋ ದೋಷದಿಂದ ಈ ಬಾಂಬ್ ಸ್ಫೋಟಗೊಂಡಿದೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಶೇ.50 ರಷ್ಟು ದೇಹ ಸುಟ್ಟು ಹೋಗಿದೆ. ಆಧಾರ್ ಕಾರ್ಡ್ನಲ್ಲಿ ಹುಬ್ಬಳ್ಳಿಯ ಪ್ರೇಮ್ ರಾಜ್ ಹೆಸರಿನವಿಳಾಸವಿರುವುದು ಪತ್ತೆಯಾಗಿದೆ. ಆದರೆ ಇದು ನಕಲಿ ಐಡಿ ಕಾರ್ಡ್ ಎಂಬುದು ದೃಢಪಟ್ಟಿದೆ. ಇದನ್ನೂ ಓದಿ: ಮಂಗಳೂರಿನ ಆಟೋದಲ್ಲಿ ಕುಕ್ಕರ್ ಅನಿರೀಕ್ಷಿತವಾಗಿ ಸ್ಪೋಟಗೊಂಡಿಲ್ಲ, ಇದೊಂದು ಉಗ್ರ ಕೃತ್ಯ: ಪ್ರವೀಣ್ ಸೂದ್
ಆತನ ಹೇಳಿಕೆಯಂತೆ ಪೊಲೀಸರ ತಂಡ ಮೈಸೂರಿನಲ್ಲಿ ತನಿಖೆ ನಡೆಸುತ್ತಿದೆ. ಪ್ರೇಮ್ ರಾಜ್ ತನ್ನ ಅಣ್ಣ ಎಂದು ತಿಳಿಸಿ ಬಾಬುರಾವ್ ಎಂಬವರ ನಂಬರ್ ನೀಡಿದ್ದಾನೆ. ಆದರೆ ಆ ನಂಬರ್ಗೆ ಕರೆ ಮಾಡಿದಾಗ ಪ್ರೇಮ್ ರಾಜ್ ತನ್ನ ಸಂಬಂಧಿಯೇ ಅಲ್ಲ ಎಂದು ತಿಳಿಸಿದ್ದಾರೆ. ಆತ ತನ್ನ ರೂಂನಲ್ಲಿದ್ದ. ಬೆಂಗಳೂರಿಗೆ ಹೋಗುತ್ತೇನೆ ಎಂದು ತಿಳಿಸಿದ್ದ. ಆತನ ಬಗ್ಗೆ ಬೇರೆ ಏನೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಫೋಟ ಸಂಭವಿಸಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಸ್ಫೋಟವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡ ಘಟನಾ ಸ್ಥಳಗ್ಗೆ ಆಗಮಿಸಲಿದೆ. ಇಂದು ಮಂಗಳೂರಿಗೆ ಎನ್ಐಎ ತಂಡವೂ ಆಗಮಿಸುವ ಸಾಧ್ಯತೆಯಿದೆ.
ಶನಿವಾರ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಆಗಮಿಸಿದ್ದರು. ಇದನ್ನೂ ಓದಿ: ಮಂಗಳೂರಿನ ಆಟೋದಲ್ಲಿ ಕುಕ್ಕರ್ ಸ್ಫೋಟ – ನಟ್, ಬೋಲ್ಟ್, ಬ್ಯಾಟರಿ ಪತ್ತೆ