ಕೋಲ್ಕತ್ತಾ: 2024ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಿಜವಾದ ಗೇಮ್ ಚೇಂಜರ್ ಆಗಲಿದ್ದಾರೆ ಎಂದು ಸಂಸದ ಶತ್ರುಘ್ನ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದ ಉಪಚುನಾವಣೆಯಲ್ಲಿ ಅಸನ್ಸೋಲ್ ಲೋಕಸಭಾ ಕ್ಷೇತ್ರವನ್ನು ಗೆದ್ದ ಶತ್ರುಘ್ನ ಸಿನ್ಹಾ ಮಾಧ್ಯಮದ ಜೊತೆ ಮಾತನಾಡಿ, ನಾನು ಹೃದಯಗಳ ರಾಣಿ ಮಮತಾ ಬ್ಯಾನರ್ಜಿ ಅವರಿಂದ ಪ್ರಭಾವಿತನಾಗಿದ್ದೇನೆ. ಅವರು ಎಲ್ಲರೂ ಗೌರವಿಸಲ್ಪಡುವ ನಾಯಕಿಯಾಗಿದ್ದಾರೆ. 2024ರ ಚುನಾವಣೆಯಲ್ಲಿ ಅವರು ನಿಜವಾದ ಆಟ ಬದಲಾಯಿಸುವವರು ಎಂಬುದನ್ನು ನೋಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದರು. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ಸಂಜಯ್ ರಾವತ್
ರಾಜಕೀಯದಲ್ಲಿ ತಮ್ಮ ಪ್ರಯಾಣದ ಕುರಿತು ಮಾತನಾಡಿದ ಅವರು, ನನ್ನ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ನಾನು ರಾಜಕೀಯ ನಾಯಕ ಜಯಪ್ರಕಾಶ್ ನಾರಾಯಣರಿಂದ ಪ್ರಭಾವಿತನಾಗಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ನಿರ್ಗತಿಕನಿಗೆ ಸ್ನಾನ ಮಾಡಿಸಿದ ಪೊಲೀಸ್ ಆಫೀಸರ್ – ಸಾರ್ವಜನಿಕರಿಂದ ಭಾರೀ ಮೆಚ್ಚುಗೆ
ಇದಲ್ಲದೆ ಬಿಜೆಪಿಯು ಪ್ರಜಾಪ್ರಭುತ್ವದಿಂದ ನಿರಂಕುಶ ಪ್ರಭುತ್ವವಾಗಿ ಮಾರ್ಪಟ್ಟಿರುವುದರಿಂದ ಬಿಜೆಪಿಯನ್ನು ತೊರೆದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ಗೆ ಸೇರಿದ್ದೇನೆ ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಅವರು, ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿಯವರಿದ್ದಾಗ ಬಿಜೆಪಿ ಪ್ರಜಾಸತ್ತಾತ್ಮಕ ಪಕ್ಷವಾಗಿತ್ತು. ಆದರೆ ಪ್ರಧಾನಿ ಮೋದಿ ನಡೆಸುತ್ತಿರುವ ಇಂದಿನ ಬಿಜೆಪಿ ನಿರಂಕುಶ ಪ್ರಭುತ್ವವಾಗಿದೆ ಎಂದು ದೂರಿದರು.
ಉಪಚುನಾವಣೆಯಲ್ಲಿ ಬಿಜೆಪಿಯ ಅಗ್ನಿಮಿತ್ರ ಪಾಲ್ ಅವರನ್ನು 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಶತ್ರುಘ್ನ ಸಿನ್ಹಾ ಸೋಲಿಸಿದ್ದರು. ಈ ಹಿಂದೆ ಪಶ್ಚಿಮ ಬಂಗಾಳದ ಅಸನ್ಸೋಲ್ನಲ್ಲಿ ಟಿಎಂಸಿ ಹಿಂದೆಂದೂ ಗೆದ್ದಿರಲಿಲ್ಲ.