ನವದೆಹಲಿ: ಹೆದ್ದಾರಿಗಳನ್ನು ಡಿನೋಟಿಫೈ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ವಜಾಗೊಳಿಸುವ ಮೂಲಕ ನಗರಗಳಲ್ಲಿ ಬಾರ್ ಹೊಂದಿರುವ ಮಾಲೀಕರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಪಂಜಾಬ್ ಸರ್ಕಾರ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿದ್ದನ್ನು ಪ್ರಶ್ನಿಸಿ ಸರ್ಕಾರೇತರ ಸಂಸ್ಥೆಯೊಂದು(ಎನ್ಜಿಒ) ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿತ್ತು. ಜುಲೈ 4 ರಂದು ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಡಿನೋಟಿಫೈ ಮಾಡಿದ್ರೆ ತಪ್ಪೇನು ಎಂದು ಪ್ರಶ್ನಿಸಿತ್ತು.
ಮದ್ಯ ಸೇವಿಸಿ ಹೆದ್ದಾರಿಗಳಲ್ಲಿ ವೇಗವಾಗಿ ಸಂಚರಿಸುವ ಹಿನ್ನೆಲೆಯಲ್ಲಿ ನಾವು ನಾವು ಮದ್ಯ ಮಾರಾಟವನ್ನು ನಿಷೇಧಿಸಿದ್ದೇವೆ. ಆದರೆ ನಗರದಲ್ಲಿರುವ ರಸ್ತೆಯಲ್ಲಿ ಈ ರೀತಿಯ ಸಮಸ್ಯೆ ಆಗುವುದಿಲ್ಲ. ಅಷ್ಟೇ ಅಲ್ಲದೇ ನಗರ ವ್ಯಾಪ್ತಿಯಲ್ಲಿ ಹೆದ್ದಾರಿಗಳಲ್ಲಿ ವೇಗ ನಿಯಂತ್ರಣ ಇರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ವಿಚಾರಣೆ ವೇಳೆ ನಗರದ ಒಳಗಡೆ ಇರುವ ಟ್ರಾಫಿಕ್ ಮತ್ತು ನಗರದ ಹೊರಗಡೆ ಇರುವ ಟ್ರಾಫಿಕ್ ಬೇರೆ. ಎರಡು ನಗರಗಳ ಮಧ್ಯೆ ಸಂಚರಿಸುವಾಗ ಚಾಲಕರು ಮದ್ಯ ಸೇವನೆ ಮಾಡದೇ ಇರಲು ಈ ನಿಷೇಧವನ್ನು ಹೇರಲಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟು ಅರ್ಜಿಯ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತ್ತು.
ಅರ್ಜಿ ವಜಾಗೊಂಡ ಕಾರಣ ಬೆಂಗಳೂರು ನಗರದ ಎಂಜಿ ರಸ್ತೆಯಲ್ಲಿನ ಸ್ಥಗಿತಗೊಂಡಿರುವ 138 ಕ್ಕೂ ಹೆಚ್ಚು ಬಾರ್, ಪಬ್ಗಳು ಮತ್ತೆ ಆರಂಭವಾಗಲಿದೆ. ಅಷ್ಟೇ ಅಲ್ಲದೇ ನಗರದ ಬ್ರಿಗೆಡ್ ರೋಡ್, ಇಂದಿರಾನಗರ, ಕೋರಮಂಗಲದಲ್ಲಿರುವ ಬಾರ್ಗಳೂ ಪುನರಾರಂಭಗೊಳ್ಳಲಿವೆ.
ಸುಪ್ರೀಂ ಹೇಳಿದ್ದು ಏನು?
ಮದ್ಯಪಾನದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 20 ಸಾವಿರ ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ 200 ಮೀಟರ್ ಹಾಗೂ 20 ಸಾವಿರ ಮೇಲ್ಪಟ್ಟು ಜನಸಂಖ್ಯೆ ಇರುವ ನಗರಗಳಲ್ಲಿ 500 ಮೀಟರ್ ವರೆಗಿರುವ ಮದ್ಯ ದಂಗಡಿಗಳನ್ನು ಸ್ಥಳಾಂತರಿಸಬೇಕು. ಇಲ್ಲವೇ ಬಂದ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ಈ ಮದ್ಯದ ಅಂಗಡಿಗಳ ಪರಾವನಗಿಗಳನ್ನು ಮಾರ್ಚ್ 31ರ ಬಳಿಕ ನವೀಕರಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ಪೀಠ ಹೇಳಿತ್ತು. ಈ ಆದೇಶದ ಬಳಿಕ ರಾಜ್ಯ ಸರ್ಕಾರಗಳು ನಗರ ಒಳಗಡೆ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿ ಆದೇಶ ಹೊರಡಿಸಿತ್ತು.