ಚಾಮರಾಜನಗರ: ಅರಣ್ಯದಲ್ಲಿ ಮತ್ತೊಂದು ಚಿರತೆಯೊಂದಿಗಿನ ಕಾಳಗದಲ್ಲಿ ಗಾಯಗೊಂಡಿದ್ದ ಚಿರತೆಯೊಂದು ಚಾಮರಾಜನಗರ ಸಮೀಪದ ಹೊನ್ನಳ್ಳಿ ಬಳಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತ್ತು.
ಕಳೆದ ನಾಲ್ಕೈದು ದಿನಗಳಿಂದ ಹೊನ್ನಳ್ಳಿ ಹೊರಭಾಗದ ಜಮೀನುಗಳಲ್ಲಿ ಅಡ್ಡಾಡುತ್ತಿದ್ದ ಈ ಚಿರತೆ ಸೋಮವಾರ ತೋಟವೊಂದರ ಮನೆಯ ಬಾಗಿಲಿನ ಬಳಿ ಮಲಗಿತ್ತು. ಬೆಳಗ್ಗೆ ಬಾಗಿಲು ತೆರೆದ ಮನೆಯವರು ಚಿರತೆ ನೋಡಿ ಗಾಬರಿಗೊಂಡು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಚಾಮರಾಜನಗರದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಸ್ವಸ್ಥಗೊಂಡಿದ್ದ ಚಿರತೆಯನ್ನು ಹಗ್ಗದಿಂದ ಕಟ್ಟಿಹಾಕಿದರು. ಚಿರತೆಯ ತಲೆ ಭಾಗದಲ್ಲಿ ತೀವ್ರ ಗಾಯಗಳಾಗಿದ್ದು, ಸ್ಥಳೀಯವಾಗಿ ಅರಣ್ಯ ಇಲಾಖೆಯಲ್ಲಿ ಪಶುವೈದ್ಯರು ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಮೃಗಾಲಯಕ್ಕೆ ಕೊಂಡೊಯ್ಯಲಾಯಿತು.