ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ವಾಹನ ತಪಾಸಣೆ ವೇಳೆ ಆಸ್ಪತ್ರೆಗೆ ತೆರಳುವ ನಾಟಕವಾಡಿದ 7 ಉಗ್ರರನ್ನು ಭದ್ರತಾ ಪಡೆ (Indian Army) ಬಂಧಿಸಿದೆ.
ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರ ತಂಡವನ್ನು ಭದ್ರತಾ ಪಡೆಗಳು ಭೇದಿಸಿದೆ. ಆರೋಪಿಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಬಂಧಿತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಅಂಗಡಿಗಳ ಮೇಲೆ ಸೇನೆ ದಾಳಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ
ಆ.8ರಂದು ಉತ್ತರ ಕಾಶ್ಮೀರ ಜಿಲ್ಲೆಯ ಉರಿ ಪ್ರದೇಶದ ಚುರುಂಡಾದಲ್ಲಿ ಸೇನೆ ಗಸ್ತು ತಿರುಗುವ ಸಮಯದಲ್ಲಿ ಶಂಕಿತನೊಬ್ಬನನ್ನು ಗಮನಿಸಿತ್ತು. ಈ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದ. ಬಳಿಕ ಆತನನ್ನು ಸೇನೆ ಬಂಧಿಸಿತ್ತು. ಆತನನ್ನು ಪರಿಶೀಲಿಸಿದಾಗ ಎರಡು ಗ್ರೆನೇಡ್ಗಳು ಪತ್ತೆಯಾಗಿತ್ತು. ವಿಚಾರಣೆ ವೇಳೆ ಆತ ಹಲವರ ವಿಚಾರ ಬಾಯ್ಬಿಟ್ಟಿದ್ದ.
ಈ ಮಾಹಿತಿ ಆಧಾರದ ರಸ್ತೆಯಲ್ಲಿ ವಾಹನಗಳ ತಪಾಸಣೆ ಹೆಚ್ಚಿಸಲಾಗಿತ್ತು. ಈ ವೇಳೆ ಪೊವಾರಿಯನ್ ಥಾಜಲ್ ಉರಿಯಲ್ಲಿ ವಾಹನ ತಪಾಸಣೆ ವೇಳೆ ಭದ್ರತಾ ಪಡೆಗಳು ವಾಹನ ಒಂದನ್ನು ತಡೆದಿದ್ದರು. ಈ ವೇಳೆ ಆಸ್ಪತ್ರೆಗೆ ತೆರಳುತ್ತಿರುವುದಾಗಿ ಅದರಲ್ಲಿದ್ದ ವ್ಯಕ್ತಿಗಳು ತಿಳಿಸಿದ್ದರು. ಬಳಿಕ ಅನುಮಾನದ ಮೇಲೆ ವಾಹನ ತಪಾಸಣೆ ಮಾಡಿದಾಗ ನಾಲ್ಕು ಹ್ಯಾಂಡ್ ಗ್ರೆನೇಡ್ಗಳು, ಎರಡು ಪಿಸ್ತೂಲ್ಗಳು, ಎರಡು ಪಿಸ್ತೂಲ್ ಮ್ಯಾಗಜೀನ್ಗಳು, 10 ಜೀವಂತ ಗುಂಡುಗಳು ಮತ್ತು 50,000 ರೂ. ನಗದು ಪತ್ತೆಯಾಗಿದೆ. ಬಳಿಕ ಆರೋಪಿಗಳನ್ನು ಸೇನೆ ಬಂಧಿಸಿದೆ. ಆರೋಪಿಗಳು ಪಾಕಿಸ್ತಾನದ (Pakistan) ಉಗ್ರರ ಆಜ್ಞೆಯ ಮೇರೆಗೆ ಶಸ್ತ್ರಾಸ್ತ್ರಗಳ ಸಾಗಾಟದಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ
Web Stories