ಮಂಗಳೂರು/ಉಡುಪಿ: ಭಾರೀ ಮಳೆಯಿಂದಾಗಿ ಮಂಗಳೂರಿನಲ್ಲಿ ರೈಲು ಹಳಿಗಳಲ್ಲಿ ಭೂಕುಸಿತವಾಗಿ, ರೈಲು ಸೇವೆಯಲ್ಲಿ ವ್ಯತ್ಯಯವಾಗಿದೆ. ಇತ್ತ ಮಳೆಯಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ.
ಎರಡು ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ಮಂಗಳೂರು ಹವಾಮಾನ ವೈಪರೀತ್ಯಗಳಿಂದ ತಡವಾಗಿ ಆಗಮಿಸಿವೆ. ಇನ್ನೂ ಮಳೆಯಿಂದಾಗಿ ಅನೇಕ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಭಾರೀ ಮಳೆಯಿಂದಾಗಿ ರೈಲು ಹಳಿಗಳಲ್ಲಿ ಭೂಕುಸಿತವಾಗಿದೆ. ವಿವಿಧೆಡೆ ರೈಲ್ವೇ ಹಳಿಗಳಿಗೆ ಹಾನಿಯಾಗಿದೆ. ಮಲಬಾರ್, ಮಾವೇಲಿ, ಪರಶುರಾಮ್ ಎಕ್ಸ್ ಪ್ರೆಸ್ ರೈಲು ವಿಳಂಬವಾಗಲಿದೆ. ಚೆನ್ನೈ ಮೈಲ್, ವೆಸ್ಟ್ ಕೋಸ್ಟ್, ಮತ್ಸ್ಯಗಂಧ ರೈಲು ಸಮಯ ಮರು ನಿಗದಿಯಾಗಲಿದೆ. ಇನ್ನೂ ಮಂಗಳೂರು ಸೆಂಟ್ರಲ್- ಮುಂಬೈ ಎಕ್ಸ್ ಪ್ರೆಸ್ ಸಮಯ ಬದಲಾಗಿದೆ.
ಮಂಗಳೂರಿನಲ್ಲಿ ಧಾರಾಕಾರ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಸಂಚರಿಸಬಾರದು. ನೀರು ನಿಂತ ಪ್ರದೇಶಕ್ಕೆ ತೆರಳದಂತೆ ಪೊಲೀಸರ ಸೂಚನೆ ನೀಡಿದ್ದಾರೆ. ತುರ್ತು ಸ್ಪಂದನೆಗೆ ಕಂಟ್ರೋಲ್ ರೂಂ 100 ಅಥವಾ 1077 ಗೆ ಕರೆ ಮಾಡುವಂತೆ ಸಲಹೆ ನೀಡಿದ್ದು, ಮಂಗಳೂರಿನಲ್ಲಿ ಸಂಚಾರ ಬದಲು ವ್ಯವಸ್ಥೆ ಪಾಲನೆಗೆ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಉಡುಪಿಯಲ್ಲಿ ನೀರುಪಾಲಾಗಿದ್ದ ಬಾಲಕಿಯ ಮೃತದೇಹ ಇಂದು ಪತ್ತೆಯಾಗಿದೆ. ನಿಧಿ ಆಚಾರ್ಯ(9) ನೀರುಪಾಲಾಗಿದ್ದ ಬಾಲಕಿಯಾಗಿದ್ದು, ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ.
ಮಂಗಳವಾರ ಸಂಜೆ ನಿಧಿ ಕೃತಕ ನೆರೆಗೆ ನೀರು ಪಾಲಾಗಿದ್ದು, ಶಾಲೆ ಬಿಟ್ಟು ಮನೆಗೆ ತೆರಳುವ ವೇಳೆ ಈ ಘಟನೆ ಸಂಭವಿಸಿತ್ತು. ಉಡುಪಿಯ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಿಧಿ ಆಚಾರ್ಯ ಪತ್ತೆಗಾಗಿ ಅಗ್ನಿಶಾಮಕ ದಳ, ಸ್ಥಳೀಯರು ಶೋಧ ನಡೆಸಿದ್ದರು.