ಲಕ್ನೋ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾಗೆ ಸೇರಿದ ಮಹೀಂದ್ರ ಥಾರ್ ವಾಹನವನ್ನು ಹತ್ತಿಸಿರುವ ವೀಡಿಯೋ ಈಗ ಸಿಕ್ಕಿದೆ. ಆ ವೀಡಿಯೋದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆಯಲ್ಲಿ ತೆರಳ್ತಿದ್ದವರ ಮೇಲೆ ಏಕಾಏಕಿ ವಾಹನವನ್ನು ಹತ್ತಿಸಲಾಗಿದೆ. ಇದನ್ನೂ ಓದಿ: ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ – ನಾಲ್ವರು ರೈತರು ಸೇರಿ 8 ಮಂದಿ ಸಾವು
ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ಪ್ರಸಾದ್ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ವಿರುದ್ಧ ರೈತರು ಕಪ್ಪು ಬಾವುಟ ಹಿಡಿದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಇವರ ಜೊತೆಗೆ ಬೆಂಗಾವಲು ವಾಹನಗಳ ಸಾಲಿನಲ್ಲಿದ್ದ ಮಹೀಂದ್ರ ಗಾಡಿಯನ್ನು ರೈತರ ಮೇಲೆ ಹತ್ತಿಸಲಾಗಿದ್ದು, ಇದರಲ್ಲಿ ಸಚಿವನ ಪುತ್ರ ಆಶಿಶ್ ಮಿಶ್ರಾ ಇದ್ದ ಎಂದು ರೈತರು ಈಗಾಗಲೇ ಆರೋಪಿಸಿದ್ದಾರೆ. ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ
ಈ ವಾಹನದ ಹಿಂಭಾಗದಲ್ಲಿ ಬಿಜೆಪಿ ಪಕ್ಷದ ಬ್ಯಾನರ್ನ್ನೂ ಕಟ್ಟಲಾಗಿತ್ತು. ವಾಹನ ಹೋದ ಬಳಿಕ ಅದರ ಹಿಂದೆಯೇ ಇನ್ನೊಂದು ಕಾರು ಕೂಡಾ ಹಾದು ಹೋಗಿದೆ. ಕಾರು ಹತ್ತಿಸಿದ್ದರಿಂದ ನಾಲ್ವರು ರೈತರು ಪ್ರಾಣ ಕಳೆದುಕೊಂಡರು. ಆ ಬಳಿಕ ನಡೆದ ಹಿಂಸಾಚಾರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಹಿಂದಿ ಸುದ್ದಿವಾಹಿನಿ ಓರ್ವ ವರದಿಗಾರ ಕೂಡಾ ಬಲಿಯಾಗಿದ್ದಾರೆ. ಕೃತ್ಯ ಸಂಬಂಧ ಕೇಂದ್ರ ಸಚಿವನ ಮಗನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಗೆಸ್ಟ್ ಹೌಸ್ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್
ಮೃತ ರೈತರ ಕುಟುಂಬಸ್ಥರಿಗೆ 45 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ರೈತರ ಮೇಲೆ ವಾಹನ ಹತ್ತಿಸಿರುವ ಕೃತ್ಯವನ್ನು ಖಂಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಸಿಬಿಐ ತನಿಖೆ ನಡೆಸುವಂತೆ ಕೋರಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ