ಉಡುಪಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಬ್ಬ ಅನುಭವಿ ರಾಜಕಾರಣಿದ್ದು, ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹಾರೈಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ವಿಕೃತಿಯಾಗಿವೆ. ರೆಸಾರ್ಟ್, ಆಪರೇಷನ್ ನಲ್ಲಿ ಜನಪ್ರತಿನಿಧಿಗಳು ತಲ್ಲೀನರಾಗಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ನೈತಿಕತೆ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡೆಸಿದರು.
ಕರ್ನಾಟಕ ರಾಜಕೀಯ ಪರಿಸ್ಥಿತಿಯಲ್ಲಿ ಗೊಂದಲ ನಿರ್ಮಾಣವಾದರೆ ರಾಷ್ಟ್ರಪತಿ ಆಡಳಿತದ ಬದಲು ಸರ್ವ ಪಕ್ಷ ಸರ್ಕಾರ ಜಾರಿಗೆ ಬರಬೇಕು. ಅಂತಹ ಪ್ರಯೋಗ ರಾಜ್ಯದಲ್ಲಿ ನಡೆಯಬೇಕಿದ್ದು, ಸರ್ವಪಕ್ಷದ ಆದರ್ಶ ಮಂತ್ರಿ ಮಂಡಲ ರಚನೆಯಾಗಬೇಕು. ವಿಪಕ್ಷ ಮುಕ್ತ ಸರ್ಕಾರ ಸರಿಯಲ್ಲ. ಆದರೆ ವಿಪಕ್ಷ ಇರಬೇಕು ಎನ್ನುವುದು ನನ್ನ ವಾದ ಎಂದು ಸ್ವಾಮಿಜಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಪೂರ್ಣ ತೃಪ್ತಿ ತಂದಿಲ್ಲ. ಮೋದಿ ಅವರಿಂದ ಸಾಕಷ್ಟು ಕೆಲಸಗಳಾಗಿವೆ. ಆದರೆ ನಿರೀಕ್ಷೆಯಷ್ಟು ಸಾಧನೆ ಹಾಗೂ ಬದಲಾವಣೆಗಳಾಗಿಲ್ಲ ಎನ್ನುವ ಬೇಸರವಿದೆ. ರಾಮ ಮಂದಿರಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು, ಗಂಗಾ ನದಿ ಶುದ್ಧೀಕರಣ, ವಿದೇಶದಲ್ಲಿರು ಕಪ್ಪು ಹಣ ದೇಶಕ್ಕೆ ಮರಳಿ ತರುವುದು ಸೇರಿದಂತೆ ಅನೇಕ ಆಶ್ವಾಸನೆಗಳು ಪೂರ್ಣವಾಗಿಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟರು.