ಶಿವಮೊಗ್ಗ: ರಾಜ್ಯ ಭಯೋತ್ಪಾದಕರು, ಕೊಲೆಗಡುಕರ ಹಾಗೂ ಗೂಂಡಾಗಳ ಕೇಂದ್ರ ಆಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಗೊಳಗಾಗಿ ನಗರದ (Shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭದ್ರಾವತಿಯ ಬಿಜೆಪಿ (BJP) ಕಾರ್ಯಕರ್ತ ಗೋಕುಲ್ ಕೃಷ್ಣನ್ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಶಾಂತಿ ಪ್ರಿಯರಾದ ಕರ್ನಾಟಕ ರಾಜ್ಯದಲ್ಲಿ, ರಾಜಭವನಕ್ಕೂ ಬಾಂಬ್ ಬೆದರಿಕೆ ಹಾಕುವ ಧೈರ್ಯ ದೇಶದ್ರೋಹಿಗಳಿಗೆ ಬಂದಿದೆ. ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದ್ದು, ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಈ ಬಗ್ಗೆ ಸೀರಿಯಸ್ನೆಸ್ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಗದಗದ ಶಿಲ್ಪಿಗೆ ಆಹ್ವಾನ
ಪ್ರಕರಣವನ್ನು ಎನ್ಐಎಗೆ ಕೊಟ್ಟು ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಎಂದು ಹೇಳಬೇಕಿತ್ತು. ರಾಜ್ಯ ಸರ್ಕಾರ ಈ ರೀತಿ ಮಾಡಿದರೆ ಭಯೋತ್ಪಾದಕರಿಗೆ ಧೈರ್ಯ ಬರುತ್ತಿರಲಿಲ್ಲ. ವಿದೇಶಿ ಭಯೋತ್ಪಾದಕರನ್ನೇ ಕೇಂದ್ರ ಸರ್ಕಾರ ಮೆಟ್ಟಿ ನಿಂತಿದೆ. ರಾಜ್ಯ ಸರ್ಕಾರಕ್ಕೆ ಭಯೋತ್ಪಾದಕರನ್ನು ಕಂಡರೆ ಏಕೆ ಭಯ? ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರಿದ್ದಾರೆ. ಮುಸ್ಲಿಂ ವೋಟು ಹೋಗುತ್ತವೆ ಎನ್ನುವ ಭಯನಾ ಎಂದು ಅವರು ಪ್ರಶ್ನಿಸಿದ್ದಾರೆ.
ಜಮೀರ್ ಅಹಮ್ಮದ್ ತೆಲಂಗಾಣದಲ್ಲಿ ಹೇಳ್ತಾರೆ, ಯು.ಟಿ ಖಾದರ್ ಅವರನ್ನು ಸ್ಪೀಕರ್ ಮಾಡಿದ್ದೇವೆ. ಎಲ್ಲಾ ಶಾಸಕರು ಅವರಿಗೆ ತಲೆಬಾಗಿ ನಮಸ್ಕರಿಸಬೇಕು. ಈ ರೀತಿ ಹೇಳಿ ತೆಲಂಗಾಣದಲ್ಲಿ ಸ್ವಲ್ಪ ಯಶಸ್ವಿಯಾಗಿದ್ದಾರೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ತೆಲಂಗಾಣದಲ್ಲಿ ಗಾಂಜಾ, ಮಟ್ಕಾ, ಡ್ರಗ್ಸ್ ಸೇರಿದಂತೆ ಅಕ್ರಮ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಭದ್ರಾವತಿಯಲ್ಲಿ ಬಿಜೆಪಿ ಕಾರ್ಯಕರ್ತನ ಕಾರಿಗೆ ಕಲ್ಲು ಹೊಡೆದವರನ್ನು ಅರೆಸ್ಟ್ ಮಾಡಿದ್ದಾರೆ. ಆರೇಳು ಜನ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ಅರೆಸ್ಟ್ ಮಾಡುತ್ತಿಲ್ಲ. ಪೊಲೀಸ್ ಇಲಾಖೆ ಏನು ಮಾಡ್ತಿದೆ? ಶಾಸಕನ ಮಗ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ, ಸತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.
ಆರ್ಟಿಕಲ್ 370ನ್ನು ರದ್ದುಪಡಿಸಿದ್ದರ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಜಯ ಇದು. ಎರಡು ಧ್ವಜ ಹಾಗೂ ಎರಡು ಸಂವಿಧಾನ ದೇಶದಲ್ಲಿ ಇರಬಾರದು ಎಂಬುದು ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ಧೀನದಯಾಳ್ ಉಪಾಧ್ಯಾಯ ಅವರ ಕನಸಾಗಿತ್ತು. ಅವರ ಹೋರಾಟಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್ನಲ್ಲಿ ನೆಹರು ಅವರ ಕಾಲದಿಂದಲೇ ಕೀಳು ಮಟ್ಟದ ರಾಜಕಾರಣ ಇತ್ತು. ಮುಸ್ಲಿಮರನ್ನು ಓಲೈಸುವ ಕೆಲಸ ನೆಹರು ಕಾಲದಲ್ಲೇ ಇತ್ತು. ನೆಹರು ರಕ್ತದಲ್ಲಿದ್ದ ಮುಸ್ಲಿಂ ಓಲೈಕೆ, ಸಿದ್ದರಾಮಯ್ಯ ಅವರ ರಕ್ತದಲ್ಲೂ ಬಂದಿದೆ. ಕಾಂಗ್ರೆಸ್ ನವರು ವಿಧಿ ಇಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ಒಪ್ಪಿದ್ದಾರೆ. ಆರ್ಟಿಕಲ್ 370 ರದ್ದಾದರೆ ರಕ್ತದ ಕೋಡಿ ಹರಿಯುತ್ತದೆ ಎಂದು ಮುಸ್ಲಿಂ ನಾಯಕರು ಹೇಳಿದ್ದರು. ಜಮ್ಮು ಕಾಶ್ಮೀರದಲ್ಲಿ ಸಂಭ್ರಮಾಚರಣೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಸಾವರ್ಕರ್ ಫೋಟೋ ವಿಚಾರವಾಗಿ, ನೀವೆಲ್ಲ ಇರುವಾಗಲೇ ಫೋಟೋ ಹಾಕಲಾಗಿತ್ತು, ಆಗ ಬಾಯಲ್ಲಿ ಬೆಣ್ಣೆ ಅಥವಾ ಮಣ್ಣು ಇಟ್ಟುಕೊಂಡಿದ್ರಾ? ಪ್ರಿಯಾಂಕ್ ಖರ್ಗೆಯವರು ಪ್ರಚಾರಕ್ಕಾಗಿ ಈಗ ಮಾತಾಡುತ್ತಿದ್ದಾರೆ. ಅವತ್ತೇ ಸಭೆಯನ್ನು ತೊರೆಯಬಹುದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ