ಶಿವಮೊಗ್ಗ: ಸಮಾಜದಲ್ಲಿ ಒಬ್ಬ ಕುಂಟ ಇರುತ್ತಾನೆ. ಆ ಕುಂಟನಿಗೆ ಎದುರಿಗೆ ಇರುವ ಪೈಲ್ವಾನ್ ಎದುರಿಸುವ ಶಕ್ತಿ ಇರುವುದಿಲ್ಲ. ಆದರೂ ನೋಡುತ್ತೀರು.. ಎದ್ದು ಬಂದು ಜಾಡಿಸಿ ಒದಿತೀನಿ ಅಂತಾನೆ. ಅವನಿಗೆ ಎದ್ದೇಳೋಕೆ ಶಕ್ತಿ ಇಲ್ಲ. ಇನ್ನು ಒದೆಯುವುದು ಎಲ್ಲಿಂದ. ಜೆಡಿಎಸ್ ಪರಿಸ್ಥಿತಿ ಸಹ ಇದೇ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ದೇವೇಗೌಡರು ಅವರ ಪಕ್ಷವನ್ನು ಉಳಿಸಿಕೊಳ್ಳಲಿ ನಮ್ಮ ಅಭ್ಯಂತರ ಇಲ್ಲ. ಆದರೆ ನಿಮ್ಮ ಪಕ್ಷದಲ್ಲಿ ಇದ್ದವರೆಲ್ಲಾ ಓಡೋಡಿ, ಓಡೋಡಿ ಹೋದರೆ ನಾವೇನು ಮಾಡೋಣ ಎಂದರು. ಇದನ್ನೂ ಓದಿ: RSS ಟೀಕಿಸಿದರೆ ದೊಡ್ಡ ಮನುಷ್ಯರಾಗ್ತೇವೆ ಅನ್ನೋ ಭ್ರಮೆಯಲ್ಲಿದ್ದಾರೆ ಮಾಜಿ ಸಿಎಂಗಳು: ಈಶ್ವರಪ್ಪ
ಕಾಂಗ್ರೆಸ್ ಪರಿಸ್ಥಿತಿ ಏನು ಭಿನ್ನವಾಗಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ದಿನೇ ದಿನೇ ಪ್ರಾದೇಶಿಕ ಪಕ್ಷವಾಗುತ್ತಿದೆ. ಕಾಂಗ್ರೆಸ್ ನಲ್ಲಿ ಇದ್ದವರು ಅನೇಕರು ಸೋಲುತ್ತಿದ್ದಾರೆ. ಇನ್ನು ಅನೇಕರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂದರು.
ಇತ್ತೀಚೆಗೆ ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಪಂಜಾಬಿನಲ್ಲಿ ಎಷ್ಟರಮಟ್ಟಿಗೆ ಗುಂಪುಗಾರಿಕೆ ಇದೆ. ಕರ್ನಾಟಕದಲ್ಲಿ ಗುಂಪುಗಾರಿಕೆ ಹೇಗಿದೆ ಎಂಬುದನ್ನು ನೋಡುತ್ತಿದ್ದೇವೆ. ಇಡೀ ದೇಶದಲ್ಲಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ಸೇ ಇವತ್ತು ಪ್ರಾದೇಶಿಕ ಪಕ್ಷವಾಗುತ್ತಿದೆ. ಕರ್ನಾಟಕದಲ್ಲು ಕಾಂಗ್ರೆಸ್ ಛಿದ್ರ, ಛಿದ್ರವಾಗಿ ಹೋಗುವುದರಲ್ಲಿ ಅನುಮಾನ ಇಲ್ಲ ಎಂದರು.