ಕೊಪ್ಪಳ: ರಾಜ್ಯದ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳನ್ನು ಭತ್ತದ ನಾಡು, ಭತ್ತದ ಕಣಜ ಅಂತಲೇ ಕರೆಯುತ್ತಾರೆ. ಇಲ್ಲಿ ಬೆಳೆಯುವ ಸೋನಾ ಮಸೂರಿ ಭತ್ತ ಹೊರ ದೇಶಕ್ಕೂ ರಫ್ತಾಗುತ್ತದೆ. ಅಷ್ಟೊಂದು ಪ್ರಮಾಣದಲ್ಲಿ ಇಲ್ಲಿಯ ರೈತರು ಭತ್ತದ ಮೆಲೆ ಅವಲಂಬಿತರಾಗಿದ್ದಾರೆ. ಆದರೆ ರೈತರು ತಾವು ಅವೈಜ್ಞಾನಿಕವಾಗಿ ಭತ್ತದ ಮೇಲೆ ಸಿಂಪಡಿಸುವ ಕೀಟನಾಶಕಗಳಿಂದ ಇಡೀ ಭತ್ತದ ಬೆಳೆಯೇ ವಿಷಪೂರಿತವಾಗುತ್ತಿದೆ.
ಒಂದು ಬಾರಿ ಭತ್ತ ನಾಟಿ ಮಾಡಿದರೆ ಕಟಾವಿಗೆ ಬರೋವಷ್ಟರಲ್ಲಿ 5 ಬಾರಿ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಈ ವಿಷಪೂರಿತ ಆಹಾರ ಸೇವಿಸೋರು ಕ್ಯಾನ್ಸರ್ನಂತ ಮಾರಕ ರೋಗಕ್ಕೆ ತುತ್ತಾಗುತ್ತಾರೆ. ಈಗಲೇ ಎಚ್ಚೆತ್ತುಕೊಂಡಿಲ್ಲ ಅಂದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕೀಟಶಾಸ್ತ್ರಜ್ಞ ರಾಘವೇಂದ್ರ ಐಲಿಗಾರ ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಎನ್ವಿರಾನ್ಮೆಂಟಲ್ ಡಿಫೆನ್ಸ್ ಫಂಡ್ ವಿಶ್ಲೇಷಣಾ ವರದಿಯ ಪ್ರಕಾರ, ದಕ್ಷಿಣ ಭಾರತದ ಗದ್ದೆಗಳಲ್ಲಿ ಅನಿಯಮಿತವಾಗಿ ನೀರನ್ನು ನಿಲ್ಲಿಸಲಾಗುತ್ತದೆ. ಇದರಿಂದ ಭತ್ತದ ಗದ್ದೆಗಳು ಮಿಥೇನ್, ನೈಟ್ರಸ್ ಆಕ್ಸೈಡ್ ಗಳನ್ನು ಹೊರಸೂಸುತ್ತವೆ. ಈ ಅನಿಲಗಳು ಹೊರಸೂಸುವ ಪ್ರಮಾಣ 600 ಕಲಿದ್ದಲು ಕಾರ್ಖಾನೆಗಳು ಹೊರಸೂಸುವ ಅನಿಲಕ್ಕೆ ಸಮವಾಗಿರುತ್ತಂತೆ. ಇದು ಹೀಗೆಯೇ ಮುಂದುವರಿದರೆ ಪ್ರಕೃತಿಗೆ ಹಾನಿಕಾರಕ ಅಷ್ಟೇ ಅಲ್ಲದೇ ಭತ್ತದ ಗದ್ದೆಗಳು ಕೆಲವೇ ವರ್ಷಗಳಲ್ಲಿ ತನ್ನ ಇಳುವರಿ ಸಾಮಥ್ರ್ಯವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತವೆ ಎಂದು ಕೃಷಿ ವಿಜ್ಞಾನಿ ಕರೀಗೌಡರು ಹೇಳುತ್ತಾರೆ.
ಒಟ್ಟಿನಲ್ಲಿ ಸಾಲ-ಸೋಲ ಮಾಡಿ ಹೆಚ್ಚಿನ ಇಳುವರಿಗಾಗಿ ರೈತ ಕೀಟನಾಶಕಗಳ ಮೊರೆ ಹೋಗುತ್ತಿದ್ದಾರೆ. ಈ ಮೂಲಕ ರೈತರೇ ಖುದ್ದು ರೋಗಗಳಿಗೆ ಆಹ್ವಾನ ನೀಡುತ್ತಿದ್ದಾರೆ. ಕೀಟನಾಶಕ ಬಳಸದಿದ್ರೆ ಹಾಕಿದ್ದ ದುಡ್ಡು ವಾಪಸ್ ಬರೋಲ್ಲ ಅನ್ನೋದು ರೈತರ ವಾದ. ರೈತರು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸಿದರೆ ಹೆಚ್ಚಿನ ಅನಾಹುತ ತಡೆಯಬಹುದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv