ಬೆಂಗಳೂರು: ನಗರದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಭಕ್ತರ ವಿಚಿತ್ರ ಬೇಡಿಕೆಯ ಪತ್ರಗಳು ಸಿಕ್ಕಿವೆ.
ಮಾಂಗಲ್ಯ ಉಳಿಸಲು ದೇವಿಗೆ ಹರಕೆ ನೀಡುತ್ತಾರೆ. ಆದ್ರೇ ಇಲ್ಲೊಬ್ಬ ಭಕ್ತೆ ನನ್ನ ಗಂಡನನ್ನು ಕೊಲ್ಲಮ್ಮ. ನನ್ನ ವಿಧವೆ ಮಾಡು ಅಂತಾ ಪತ್ರ ಬರೆದು ದೇವಿ ಹುಂಡಿಗೆ ಹಾಕಿದ್ದಾರೆ. ನನ್ನನ್ನು ರಕ್ಷಿಸಿ, ನನ್ನ ಗಂಡನನ್ನು ಕೊಂದು ಹಾಕು. ಆತನ ಅಹಂಕಾರ ಹುಟ್ಟಡಗಿಸು ಅಂತಾ ಪತ್ರದಲ್ಲಿ ಬರೆಯಲಾಗಿದೆ.
ಇನ್ನೋರ್ವ ಯುವಕ ನಾನಿನ್ನು ವಾಟ್ಸಾಪ್ ಅನ್ ಇನ್ಸ್ಟಾಲ್ ಮಾಡಿಕೊಳ್ಳುತ್ತೇನೆ. ಅತ್ತೆ ಮಗಳು ಸೌಂದರ್ಯ ಹಾಗೂ ಸೌಮ್ಯ ಜೊತೆ ಚಾಟ್ ಮಾಡಲ್ಲ. ಕೆಟ್ಟ ವಿಡಿಯೋ ನೋಡಲ್ಲ. ಒಬ್ಬನೇ ಪಾನಿಪುರಿ ಕಾಫಿ-ಟೀ ಕುಡಿಯಲ್ಲ. ಇದಕ್ಕೆಲ್ಲ ನಂಗೆ ಶಕ್ತಿ ಕೊಡು ಅಂತಾ ಪತ್ರ ಬರೆದಿದ್ದಾರೆ. ಹೀಗೆ ದೇವಿಗೆ ಸಾಕಷ್ಟು ಜನ ಚಿತ್ರ ವಿಚಿತ್ರ ಬೇಡಿಕೆಯ ಪತ್ರ ಬರೆದಿದ್ದಾರೆ. ಪತ್ರ ನೋಡಿ ಮುಜರಾಯಿ ಇಲಾಖೆ ಅಧಿಕಾರಿಗಳು ದಂಗಾಗಿದ್ದಾರೆ.
ಮಹಿಳೆಯ ಪತ್ರದಲ್ಲಿ ಏನಿದೆ?: ನನ್ನ ವಿಧವೆ ಮಾಡು. ನನ್ನ ಗಂಡನ ಅಹಂಕಾರವನ್ನು ಅಡಗಿಸು. ನನ್ನ ಗಂಡ ಸತ್ತರೆ ಸಾಕು. ನಾನು ವಿಧವೆ ಆದರೆ ಸಾಕು. ನನ್ನ ಮಗನನ್ನು, ನನ್ನನ್ನು ನೆಮ್ಮದಿಯಾಗಿಡು ತಾಯಿ. ನನ್ನ ಗಂಡನ ಅಹಂಕಾರವನ್ನು ತುಳಿದು ಹಾಕು. ನನ್ನ ಗಂಡನ ಅಟ್ಟಹಾಸಕ್ಕೆ ಮಟ್ಟ ಹಾಕು ತಾಯಿ. ತಾಯಿ ಬನಶಂಕರಿ ದೇವಿ ನನ್ನ ಮನಸ್ಸಿನಲ್ಲಿರುವ ಇಷ್ಟಾರ್ಥಗಳನ್ನು ನೆರವೇರಿಸು ದೇವಿ. ನನ್ನ ಮಗನಿಗೆ ಒಳ್ಳೆಯ ವಿದ್ಯೆ, ಬುದ್ಧಿ, ಸಕಲ ಸಂತೋಷ, ಸಂಪತ್ತು, ದೀರ್ಘಾಯುಷ್ಯ, ಅಷ್ಟೈಶ್ವರ್ಯಗಳನ್ನು ದಯಪಾಲಿಸು ದೇವಿ. ನನ್ನನ್ನು ನೀನೇ ರಕ್ಷಿಸಬೇಕು. ನನ್ನ ಗಂಡನಿಗೆ ಸಾವು ಕೊಡು. ಬನಶಂಕರಿ ಅಮ್ಮ ನನ್ನ ಮಗ ಆರ್.ಪರೀಕ್ಷಿತ್ ಎಂಜಿನಿಯರ್ ಫಸ್ಟ್ ಸೆಮ್ ಎಲೆಕ್ಟ್ರಿಕಲ್ ಸಬ್ಜೆಕ್ಟ್ ರಿವ್ಯಾಲ್ಯುವೇಷನ್ಗೆ ಹಾಕಿದ್ದಾನೆ. ಅಮ್ಮ ನಿನಗೆ ಅಸಾಧ್ಯವಾದುದು ಯಾವುದೂ ಈ ಪ್ರಪಂಚದಲ್ಲಿ ಇಲ್ಲ. ನಿನ್ನ ಕಾಲಿಗೆ ಬಿದ್ದು ಬೇಡಿಕೊಳ್ಳುವೆ ತಾಯಿ. ರಿವ್ಯಾಲ್ಯುವೇಷನ್ನಲ್ಲಿ ನನ್ನ ಮಗ ಪಾಸ್ ಅಂತ ಇನ್ನು 12 ದಿನದೊಳಗೆ ಮೊಬೈಲ್ಗೆ ಮೆಸೇಜ್ ಬರುವ ಹಾಗೆ ಮಾಡವ್ವ. ನನ್ನ ಮಗನ ಕೈ ಬಿಡಬೇಡ ತಾಯಿ ನೀನೇ ಗತಿ.