ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ರಾಜ್ಯದ ಜನರಿಗೆ ಉಚಿತ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದು, ಇದೀಗ ಆಹಾರ ಮತ್ತು ನಾಗರಿಕ ಸಚಿವ ಕೆಹೆಚ್ ಮುನಿಯಪ್ಪ (KH.Muniyappa) ಅನ್ನಭಾಗ್ಯದ (Annabhagya) ಅಕ್ಕಿಯನ್ನು ಜನರಿಗೆ ಕೊಡಲು ದಾರಿ ತೋರಿಸುವಂತೆ ದೇವರ ಮೇಲೆ ಭಾರ ಹಾಕಿದ್ದಾರೆ.
ರಾಜ್ಯದ ಜನತೆಗೆ ಅನ್ನಭಾಗ್ಯ ಒದಗಿಸುವ ಸಲುವಾಗಿ ಹೆಚ್ಚುವರಿ ಅಕ್ಕಿಗೆ ಮನವಿ ಸಲ್ಲಿಸಲು ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರನ್ನು ಭೇಟಿ ಮಾಡಲು ದೆಹಲಿಗೆ (Delhi) ತೆರಳಿದ್ದರು. ಆದರೆ ಕೇಂದ್ರ ಸಚಿವರು ಅನ್ಯರಾಜ್ಯದಲ್ಲಿ ಪ್ರವಾಸದಲ್ಲಿರುವ ಹಿನ್ನೆಲೆ ಅವರನ್ನು ಭೇಟಿ ಮಾಡದೇ ಮುನಿಯಪ್ಪ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಮಹಿಳೆಯರ ಶಕ್ತಿ ಪ್ರದರ್ಶನ – ಸಾಲ ವಸೂಲಿಗೆ ಬಂದಿದ್ದಕ್ಕೆ ಬೈಕ್ಗೆ ಬೆಂಕಿ ಹಚ್ಚಿ ಆಕ್ರೋಶ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ 10 ಕೆಜಿ ಆದಷ್ಟು ಬೇಗ ಕೊಡುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಅದರ ಕೆಲಸಗಳು ಸುಗಮವಾಗಿ ಸಾಗುತ್ತಿದೆ. ಆಗಸ್ಟ್ 1ರ ಒಳಗಾಗಿ ಅಕ್ಕಿಯನ್ನು ಕೊಡುತ್ತೇವೆ. ಕೇಂದ್ರ ಸರ್ಕಾರದವರು ಅಕ್ಕಿ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ. ಬುಧವಾರ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಲು ತೆರಳಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದರು. ಇದನ್ನೂ ಓದಿ: ವಿದ್ಯುತ್ ದರ ಇಳಿಸದಿದ್ರೆ ಪ್ರತಿ ಕೆಜಿ ಅಕ್ಕಿ ಬೆಲೆ 5-10 ರೂ ಏರಿಸುತ್ತೇವೆ: ರೈಸ್ ಮಿಲ್ ಮಾಲೀಕರ ಎಚ್ಚರಿಕೆ
ಕೇಂದ್ರ ಸಚಿವರು ಮಾತುಕತೆಗೆ ಸಮಯ ನೀಡಿ ಅದನ್ನು ಮುಂದಕ್ಕೆ ಹಾಕಿದ್ದಾರೆ. ಅವರು ಬಡವರಿಗೆ ಅಕ್ಕಿ ಕೊಡುವಲ್ಲಿ ಸಹಕರಿಸುತ್ತಿಲ್ಲ. ಬಡವರಿಗೆ ಕೊಡುವ ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ (Politics) ಮಾಡುತ್ತಿದೆ. ನಾವು ಜವಾಬ್ದಾರಿಯಾಗಿ ಮಾತು ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳು ಮತ್ತು ಡಿಸಿಎಂ ಅದಕ್ಕೆ ಬೇಕಾಗಿರುವ ಹಣವನ್ನು ಹೊಂದಿಸಿಕೊಟ್ಟಿದ್ದಾರೆ. ಇದು ನನ್ನ ಜವಾಬ್ದಾರಿ. ಆದಷ್ಟು ಬೇಗ ಕರ್ನಾಟಕ ರಾಜ್ಯದ ಜನರಿಗೆ ಅಕ್ಕಿ ನೀಡಲು ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಆದಷ್ಟು ಬೇಗ ಅಕ್ಕಿಯನ್ನು ಒದಗಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಅಕ್ಕಿ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡೋದು ಬೇಡ – ಅಮಿತ್ ಶಾಗೆ ಸಿದ್ದರಾಮಯ್ಯ ಮನವಿ