ಚೆನ್ನೈ: ತಮಿಳುನಾಡು ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಜೋಸೆಫ್ ವಿಜಯ್ (Vijay) ಅವರನ್ನು ಭೇಟಿಯಾಗಲು ಕೇರಳದ ದಂಪತಿ 650 ಕಿಮೀ ಕಾಲ್ನಡಿಗೆ ಪ್ರಯಾಣ ಬೆಳೆಸಿದ್ದಾರೆ.
ಕೇರಳದ ದಂಪತಿ (Kerala Couple) ಮಲಪ್ಪುರಂನಿಂದ ಚೆನ್ನೈಗೆ 650 ಕಿ.ಮೀ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿರುವುದು ವೈರಲ್ ಆಗಿದೆ. ಮೊಹಮ್ಮದ್ ರಫಿ ಮತ್ತು ಅವರ ಪತ್ನಿ ಸಿ.ಪಿ. ಉಮ್ಮು ಶಹನಮೋಲ್ ಕೇರಳದ ಮಲಪ್ಪುರಂ ಜಿಲ್ಲೆಯ ತನೂರಿನ ನಿವಾಸಿಗಳು. ರಫಿ ವೃತ್ತಿಪರ ಚಾಲಕರಾಗಿ ಕೆಲಸ ಮಾಡುತ್ತಾರೆ. ಇದನ್ನೂ ಓದಿ: ಎಂ.ಕೆ.ಸ್ಟಾಲಿನ್ ಭೇಟಿಯಾದ ತಮಿಳುನಾಡು ನೂತನ ಸಿಎಂ ವಿಜಯ್
ಮೇ 10 ರಂದು ವಿಜಯ್ ತಮಿಳುನಾಡಿನ 9 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿದರು. ಇದಕ್ಕೂ ಮೊದಲು ಅಂದರೆ, ಮೇ 7 ರಂದು ಈ ದಂಪತಿ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಇವರು ನಟ ವಿಜಯ್ ಅವರ ಅಪ್ಪಟ ಅಭಿಮಾನಿಗಳು.
ರಫಿ ಮತ್ತು ಉಮ್ಮು ದಂಪತಿ ತಮ್ಮ ಪಾದಯಾತ್ರೆಯ ವಿಡಿಯೋವನ್ನು ವ್ಲಾಗ್ನಲ್ಲಿ ಹಂಚಿಕೊಂಡಿದ್ದಾರೆ. ಸುರಕ್ಷಿತ ಆಶ್ರಯ ಸಿಕ್ಕಲ್ಲೆಲ್ಲಾ ರಾತ್ರಿಗಳನ್ನು ಕಳೆಯುತ್ತಾರೆ. ಕ್ಯಾಂಪಿಂಗ್ ಅಥವಾ ವಿಶ್ರಾಂತಿ ಪಡೆಯುತ್ತಾರೆ. ನಂತರ ಬೆಳಗಿನ ಜಾವ ತಮ್ಮ ನಡಿಗೆಯನ್ನು ಪುನರಾರಂಭಿಸುತ್ತಾರೆ. ಮೇ 10 ರಂದು ತಮಿಳುನಾಡಿನ ಪರಾಲಿಗೆ ಬಂದಿದ್ದಾರೆ.
ನಾವು ವಿಜಯ್ ಅವರ ಅಪ್ಪಟ ಅಭಿಮಾನಿಗಳು. ಅವರ ಸಿನಿಮಾಗಳು ನಮಗೆ ಫೇವರಿಟ್. ಅವರನ್ನು ನೇರವಾಗಿ ನೋಡಬೇಕೆಂದು ನಾವು ಬಹಳ ದಿನಗಳಿಂದ ಬಯಸಿದ್ದೆವು. ವಿಜಯ್ ತಮ್ಮ ರಾಜಕೀಯ ಪಕ್ಷವನ್ನು ಸ್ಥಾಪಿಸಿದಾಗ, ಚುನಾವಣೆಯಲ್ಲಿ ಗೆದ್ದಾಗ ಮತ್ತು ಮುಖ್ಯಮಂತ್ರಿಯಾಗಲು ತಯಾರಿ ಆರಂಭಿಸಿದಾಗ, ಅವರನ್ನು ಭೇಟಿ ಮಾಡುವ ನಮ್ಮ ಬಯಕೆ ಇನ್ನಷ್ಟು ಬಲವಾಯಿತು. ಆಗ ನಾವು ಚೆನ್ನೈಗೆ ನಡೆದುಕೊಂಡು ಹೋಗಲು ನಿರ್ಧರಿಸಿದೆವು ಎಂದು ದಂಪತಿ ತಿಳಿಸಿದ್ದಾರೆ.

