ಕಾರವಾರ: ಬೆಂಗಳೂರು ಬಾಂಬ್ ಸ್ಪೋಟ ಪೂರ್ವಯೋಜಿತ ಕೃತ್ಯ. ಸತ್ಯಾಸತ್ಯತೆ ಹೊರಬರಬೇಕಾದ್ರೆ NIA ತನಿಖೆಗೆ ವಹಿಸಬೇಕು. ಎರಡೂ ರಾಷ್ಟ್ರೀಯ ಪಕ್ಷಗಳು ಬಾಯಿ ಮುಚ್ಚಿಕೊಂಡು ಕೂರಬೇಕು. ನಿಮ್ಮ ನಿಮ್ಮ ಕಾಲದಲ್ಲಿ ಏನೇನು ಆಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಬಾಂಬ್ ಸ್ಫೋಟ ಆಗಲು ಎರಡೂ ಪಕ್ಷದವರು ಕಾರಣ ಇದ್ದೀರಿ. ನಿಮ್ಮ ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಹೇಳಿಕೆ ಕೊಡಬೇಡಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ಹೇಳಿಕೆಗಳು ತನಿಖೆಯ ದಾರಿ ತಪ್ಪಿಸಲಿದೆ. ಬಿಜೆಪಿ ಅವಧಿಯಲ್ಲಿಯೂ ಸ್ಫೋಟ ನಡೆದಿತ್ತು. ಕಾಂಗ್ರೆಸ್ ಅವಧಿಯಲ್ಲೂ ನಡೆದಿದೆ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯದ ಪರಿಣಾಮವೇ ಪದೇ ಪದೇ ಬಾಂಬ್ ಸ್ಫೋಟಕ್ಕೆ ಕಾರಣ. ರಾಜ್ಯ ಸರ್ಕಾರದ ಬದಲು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು. ರಾಜ್ಯ ಸರ್ಕಾರ ಪೊಲೀಸರ ಕೈ ಕಟ್ಟಿಹಾಕಿದೆ. ಪೊಲೀಸರನ್ನು ಫ್ರೀಯಾಗಿ ತನಿಖೆಗೆ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯಾರ ಅನುಮತಿ ಪಡೆದು ಪರೀಕ್ಷೆ ಮಾಡಿದ್ದಾರೆ- ಖಾಸಗಿ ಎಫ್ಎಸ್ಎಲ್ ವರದಿಗೆ ಪರಮೇಶ್ವರ್ ಗರಂ
ಪಾಕಿಸ್ತಾನ ಪರ ಘೋಷಣೆ ಕೂಗುವವರು ದೇಶದ ಪಾಲಿಗೆ ಕ್ಯಾನ್ಸರ್ ವೈರಸ್ ಇದ್ದಂತೆ. ಮೊದಲು ನಾಸಿರ್ ಹುಸೇನ್ ಮೇಲೆ ಕ್ರಮ ಕೈಗೊಳ್ಳಬೇಕು. ಭಟ್ಕಳಕ್ಕೆ ಪಾಕಿಸ್ತಾನದ ನಂಟಿದೆ ಎಂದು ಜಗನ್ನಾಥ ಶೆಟ್ಟಿ ಆಯೋಗ ವರದಿ ನೀಡಿತ್ತು. ವರದಿಯನ್ನು ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಒಪ್ಪಲಿಲ್ಲ. ಬಿಜೆಪಿ, ಕಾಂಗ್ರೆಸ್ ಗೆ ಹೆಚ್ಚು ವ್ಯತ್ಯಾಸವಿಲ್ಲ ಎಂದರು. ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಮಂಜುನಾಥ್ ಸಮ್ಮತಿ ಸೂಚಿಸುವುದಿಲ್ಲ: ಹೆಚ್ಡಿಡಿ ಅಚ್ಚರಿಯ ಹೇಳಿಕೆ
ಜಾತಿ ಗಣತಿ ವರದಿಗೆ ವಿರೋಧವಿದೆ. ದೇಶದಲ್ಲಿ ಒಟ್ಟಾಗಿ ಸಾಗಬೇಕಿದೆ. ರಾಜಕೀಯ ಪಕ್ಷಗಳು ಸಮುದಾಯಗಳನ್ನು ಒಡೆದು ಆಳಲು ಈ ವರದಿ ಸಿದ್ದಪಡಿಸಿವೆ. ಇದೊಂದು ಅವೈಜ್ಞಾನಿಕ ವರದಿ ಎಂದರು.
ದೇಶಕ್ಕೆ ಒಳಿತಾಗಬೇಕೆಂದರೆ ರಾಜ್ಯದ ಕೆಲ ಬಿಜೆಪಿ ನಾಯಕರು ಸ್ವಯಂ ನಿವೃತ್ತಿ ತೆಗೆದುಕೊಂಡು ಬೇರೆಯವರಿಗೆ ಮಾದರಿಯಾಗಲಿ. ಆದರೆ ನಿವೃತ್ತಿ ಆಗಬೇಕಾದವರ ಹೆಸರು ಬಹಿರಂಗವಾಗಿ ಹೇಳುವುದಿಲ್ಲ ಎಂದು ಹೇಳಿದರು.