ರಾಮನಗರ: 2023ರ ರಾಜ್ಯ ವಿಧಾನಸಭಾ ಚುನಾವಣೆ (Karnataka Vidhanasabha Election 2023) ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹೊತ್ತಲ್ಲಿ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕುಕ್ಕರ್, ಸೀರೆ, ಹಣ, ಬಾಡೂಟದ ಪಾಲಿಟಿಕ್ಸ್ ನಡೆಯುತ್ತಿದ್ದರೆ, ಇತ್ತ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಕಾಸ್ಟ್ಲಿ ಗಿಫ್ಟ್ ನೀಡಲು ಬಿಜೆಪಿ (BJP) ಸಂಭಾವ್ಯ ಅಭ್ಯರ್ಥಿ ಮುಂದಾಗಿದ್ದಾರೆ.
ರೇಷ್ಮೆ ನಾಡಲ್ಲಿ ಚುನಾವಣಾ ರಣಕಣ ರಂಗೇರಿದೆ. ಇತ್ತ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Congress Parajadwani Yatre) ನಡೆಯುತ್ತಿದ್ದರೆ. ಅತ್ತ ಫ್ರೀ ಸೈಟ್ (Free Site) ನೀಡಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಮುಂದಾಗಿದ್ದಾರೆ. ಮಾಗಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಸಾದ್ ಗೌಡ (Prasad Gowda) ಹೀಗೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. 1 ಸಾವಿರ ಮಹಿಳೆಯರಿಗೆ ಉಚಿತವಾಗಿ 15*20 ಅಳತೆ ಸೈಟ್ ನೀಡಲು ಸಿದ್ಧತೆ ನಡೆಸಿದ್ದು, ಬಿಡದಿ ಹೋಬಳಿಯಲ್ಲಿ 6 ಎಕರೆ ಜಾಗದಲ್ಲಿ ಫ್ರೀ ಸೈಟ್ ನೀಡಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್
ಸೈಟ್ ಹಂಚಿಕೆಯಲ್ಲಿ ಅಂಗವಿಕಲರು, ವಿಧವೆಯರು ಮತ್ತು ಅನಾಥರಿಗೆ ಮೊದಲ ಆದ್ಯತೆ ನೀಡುವುದಾಗಿ ಪ್ರಸಾದ್ ಗೌಡ ತಿಳಿಸಿದ್ದಾರೆ. ಜಮೀನು ಅಥವಾ ನಿವೇಶನ ಇಲ್ಲದವರ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಮಾಹಿತಿ ಸಂಗ್ರಹಿಸಿ ಸೈಟ್ ಹಂಚಿಕೆಗೆ ಸಿದ್ಧತೆ ನಡೆಸಿದ್ದಾರೆ. ಈ ಯೋಜನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕರೆ ಕೊಟ್ಟಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಂಚನಬೆಲೆ ಬಳಿ ಇರುವ ತಮ್ಮದೇ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ಒಟ್ಟು 3 ಸಾವಿರ ಕುಟುಂಬಗಳಿಗೆ ನಿವೇಶನ ಹಂಚುವುದಾಗಿ ಘೋಷಿಸಿದ್ದಾರೆ.
ಒಟ್ಟಾರೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳ ಮುಖಂಡರು ನಾನಾ ಆಮಿಷಗಳನ್ನ ಒಡ್ಡುತ್ತಿದ್ದಾರೆ. ಮತದಾರರ ಗಮನಸೆಳೆಯಲು ಜಿದ್ದಿಗೆ ಬಿದ್ದಿರುವ ರಾಜಕೀಯ ಮುಖಂಡರು ಕೇವಲ ಚುನಾವಣಾ ಪ್ರಚಾರಕ್ಕೋಸ್ಕರ ಇಂತಹ ಆಮಿಷ ನೀಡದೇ ಬಡಜನರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕಿದೆ. ಮತದಾರರು ಕೂಡಾ ಆಮಿಷಗಳಿಗೆ ಬಲಿಯಾಗದೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ನಿರ್ವಹಿಸಬೇಕಿದೆ.