ಬೆಂಗಳೂರು: ಅಮರನಾಥ ಧಾಮ ಹಿಮಾಲಯದ ದುರ್ಗಮ ಪರ್ವತ ಶ್ರೇಣಿಗಳ ನಡುವೆ ಇರುವುದರಿಂದ ಇಲ್ಲಿ ರಕ್ಷಣಾ ಕಾರ್ಯವೇ ಚಾಲೆಂಜ್ ಆಗಿದೆ ಎಂದು ಕರ್ನಲ್ ವಿ.ಎಂ. ನಾಯಕ್ ತಿಳಿಸಿದರು.
ಶುಕ್ರವಾರ ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥನ ಹಿಮಲಿಂಗದ ಗುಹೆ ಬಳಿ ಮೇಘಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇನ್ನೂ 40 ಮಂದಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಮರನಾಥ ಆಪರೇಷನ್ ಅತ್ಯಂತ ಕಠಿಣವಾಗಿದ್ದು, ಇಲ್ಲಿ ಪದೇ ಪದೇ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಆಪರೇಷನ್ಗೆ ಬಲುಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೇ ಈ ಅಮರನಾಥ ಧಾಮದಲ್ಲಿ ಮೋಡ ಯಾವುದು, ಬೆಟ್ಟ ಯಾವುದೂ ಎಂದು ಗೊತ್ತಾಗದ ಪರಿಸ್ಥಿತಿಯೂ ಇದೆ. ಇದರಿಂದಾಗಿ ಈ ಭಾಗದ ರಕ್ಷಣಾ ಕಾರ್ಯಾಚರಣೆಗೆ ಅತ್ಯಂತ ನುರಿತ ಯೋಧರನ್ನೇ ಬಳಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಊರಿಗೆ ವಾಪಾಸಾಗಲು ಅನುಮತಿಗಾಗಿ ಕಾಯುತ್ತಿದ್ದೇವೆ – ಯಾತ್ರೆಯಿಂದಲೇ ಪಬ್ಲಿಕ್ ಟಿವಿಗೆ ಲೈವ್ ಕೊಟ್ಟ ಕನ್ನಡಿಗರು
ಅಮರನಾಥ ಯಾತ್ರೆಯಲ್ಲಿ ಸಿಲುಕಿದವರನ್ನು ರೋಪ್ ಮುಖಾಂತರ ರಕ್ಷಣೆ ಮಾಡಬೇಕು. ಶ್ರೀನಗರದ ಆಸ್ಪತ್ರೆಗೆ ಗಾಯಾಳುಗಳನ್ನು ಕೊಂಡೊಯ್ಯಬೇಕು. ಅಮರನಾಥದಲ್ಲಿ ಕೇವಲ ಫಸ್ಟ್ ಏಡ್ ಮಾತ್ರ ಲಭ್ಯವಿದೆ. ಅಲ್ಲಿ ಮರ ಇರಲ್ಲ. ಬದಲಿಗೆ ಎಲ್ಲಾ ಕಡೆ ಬಂಡೆ ಬೆಟ್ಟಗಳ ಜೊತೆಗೆ ಕಡಿದಾದ ದುರ್ಗಮ ಮಾರ್ಗದಿಂದ ಕೂಡಿದೆ. ಹೀಗಾಗಿ ರಕ್ಷಣಾ ಕಾರ್ಯ ಕಷ್ಟವಾಗುತ್ತದೆ ಎಂದರು.
ಅಮರನಾಥ ಭಾಗದಲ್ಲಿ ಹೆಲಿಕಾಪ್ಟರ್ನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾಗಿದೆ. ಇದೇ ಪ್ರಯಾಸವಾದ ಕೆಲಸವಾಗಿದೆ. ಏಕೆಂದರೆ ವೇಗವಾಗಿ ಬೀಸುವ ಗಾಳಿಯ ಜೊತೆಗೆ ಮಳೆ ಬರುತ್ತದೆ. ಇದೆಲ್ಲದರ ಮಧ್ಯೆ ಮೋಡವೂ ಇರುತ್ತದೆ. ಈ ಎಲ್ಲಾ ಹವಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ನ್ನು ಅಲ್ಲಿ ತರುವುದು ಕಷ್ಟವಾಗಿದೆ ಎಂದರು. ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 40 ಮಂದಿ ನಾಪತ್ತೆ – ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ