ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದದ್ದು ಗೊತ್ತೇ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದ ಚಿತ್ರ ಮಾರ್ಚ್ 4ರಂದು ರಾಜ್ಯಾದ್ಯಂತ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರ ಬಿಡುಗಡೆಯಾಗಿ ಆರನೇ ವಾರಕ್ಕೆ ಕಾಲಿಟ್ಟಿದ್ದು, ಉತ್ತರಕರ್ನಾಟಕ ಭಾಗದಲ್ಲಿ ಯಶಸ್ವಿ ಆರನೇ ವಾರ ಪ್ರದರ್ಶನ ಕಾಣುತ್ತಿದೆ.
ಉತ್ತರ ಕರ್ನಾಟಕದ ಜನರ ಪ್ರೀತಿಗೆ ಪಾತ್ರವಾದ ಈ ಚಿತ್ರ ಆ ಭಾಗದ ಜನರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದೆ. ನೆಲದ ಸೊಗಡು, ಪ್ರಸ್ತುತ ಎನಿಸುವ ಕಥೆ, ಪಾತ್ರವರ್ಗದ ಅಭಿನಯ, ನೀನಾಸಂ ಮಂಜು ಕಥೆ ಕಟ್ಟಿಕೊಟ್ಟ ಪರಿಯನ್ನು ಮೆಚ್ಚಿಕೊಂಡಿದ್ದಾರೆ. ರಾಯಬಾ ಗದತ್ತ ಚಿತ್ರಮಂದಿರದಲ್ಲಿ ಆರನೇ ವಾರ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದರಿಂದ ಚಿತ್ರದ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ. ಚಿತ್ರದ ಮೇಲೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಕಂಡು ‘ಕನ್ನೇರಿ’ ಚಿತ್ರತಂಡ ಕೂಡ ಸಂತಸ ವ್ಯಕ್ತಪಡಿಸಿದೆ.ಇದನ್ನೂ ಓದಿ: ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ
‘ಕನ್ನೇರಿ’ ನೀನಾಸಂ ಮಂಜು ನಿರ್ದೇಶನದ ಎರಡನೇ ಸಿನಿಮಾ. ಕಾಡು ಜನರನ್ನು ಒಕ್ಕಲೆಬ್ಬಿಸಿದ ನಂತರ ಅವರ ಬದುಕು ಹೇಗೆಲ್ಲ ಶೋಷಣೆಗೆ ಒಳಪಡುತ್ತೆ. ಪ್ರಮುಖವಾಗಿ ಅಲ್ಲಿನ ಹೆಣ್ಣು ಮಕ್ಕಳು ಯಾವೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈಗಲೂ ಹೇಗೆ ಎದುರಿಸುತ್ತಿದ್ದಾರೆ ಅನ್ನೋದರ ಬಗ್ಗೆ ಬೆಳಕು ಚೆಲ್ಲುವ ಕಥೆ ಚಿತ್ರದಲ್ಲಿದೆ. ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅರ್ಚನಾ ಮಧುಸೂದನ್ ನಟಿಸಿದ್ದಾರೆ.
ಕರಿಸುಬ್ಬು, ಎಂ.ಕೆ.ಮಠ, ಅರುಣ್ ಸಾಗರ್, ಅನಿತಾ ಭಟ್ ಚಿತ್ರದ ತಾರಾಬಳಗದಲ್ಲಿ ಅಭಿನಯಿಸಿದ್ದಾರೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಪಿ.ಪಿ.ಹೆಬ್ಬಾರ್ ಸಿನಿಮಾ ನಿರ್ಮಾಣ ಮಾಡಿದ್ದು, ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನ, ಗಣೇಶ್ ಹೆಗ್ಡೆ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಇದನ್ನೂ ಓದಿ: ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ