ಕಲಬುರಗಿ: ಮಚ್ಚಿನಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಅಫಜಲಪುರ ರಸ್ತೆಯ ಖರ್ಗೆ ಕಾಲೋನಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು 28 ವರ್ಷದ ಪ್ರಶಾಂತ್ ಕೊಟರಗಿ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮನೆಯವರ ಜೊತೆ ಜಗಳಮಾಡಿಕೊಂಡು ಸ್ನೇಹಿತರೊಡೆನೆ ಪಾರ್ಟಿಗೆ ತೆರಳಿದ್ದ ಯುವಕ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಕೌಟುಂಬಿಕ ಕಾರಣದ ಹಿನ್ನಲೆ ಮನೆಯಲ್ಲಿ ಜಗಳ ಮಾಡಿಕೊಂಡ ಪ್ರಶಾಂತ್ ಕೊಟರಗಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಪಾರ್ಟಿ ಮಾಡಲು ಹೋಗಿದ್ದಾನೆ. ನಂತರ ಸ್ನೇಹಿತರೆಲ್ಲ ಸೇರಿ ಕಂಠ ಪೂರ್ತಿ ಮದ್ಯಸೇವನೆ ಮಾಡಿದ್ದಾರೆ. ಈ ವೇಳೆ ಸ್ನೇಹಿತರು ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಈ ಜಗಳದಲ್ಲಿ ಅಲ್ಲೇ ಇದ್ದ ಮಚ್ಚಿನಿಂದ ಕೊಚ್ಚಿ ಪ್ರಶಾಂತ್ ಕೊಟರಗಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತಿದ್ದಾರೆ.