ಕಾಫಿ ತೋಟ
ಬಹುನಿರೀಕ್ಷಿತ ‘ಕಾಫಿತೋಟ’ ಮೂವೀ ಇದೇ ಶುಕ್ರವಾರ ತೆರೆಗೆ ಬರಲಿದ್ದು, ರಾಜ್ಯಾದ್ಯಂತ ಮನೋರಂಜನೆಯ ಸವಿಯುಣಿಸಲಿದೆ.
ಮುಕ್ತ ಹಾಗೂ ಮಾಯಾಮೃಗದಂತಹ ಹಲವು ಜನಪ್ರಿಯ ಧಾರಾವಾಹಿಗಳನ್ನು ಕಿರುತೆರೆಗೆ ಪರಿಚಯಿಸಿದ ಖ್ಯಾತ ನಿರ್ದೇಶಕ ಕಾಫೀತೋಟ ಚಿತ್ರದ ನಿರ್ದೇಶನ ಮಾಡಿರುವುದು, ಬೆಳ್ಳಿತೆರೆಯ ಮೇಲೆ ಟಿ.ಎನ್. ಸೀತಾರಾಮ್ ರವರ ಕೌಶಲ್ಯ ಪ್ರದರ್ಶನದ ಬೆಳ್ಳಿಹೆಜ್ಜೆಯಾಗಲಿರುವ ನಿರೀಕ್ಷೆ ಹಲವರಲ್ಲಿ ಮೂಡಿಸಿದೆ.
ಆ್ಯಕ್ಟಿಂಗ್ ಗಿಂತ ಫೈಟಿಂಗ್ ಗಳೇ ಹೆಚ್ಚಾಗಿರುವ ಇಂದಿನ ದಿನಗಳ ಸಿನಿಮಾಗಳನ್ನು ಹೊರತುಪಡಿಸಿ, ವಿಶೇಷ ರೀತಿಯಲ್ಲಿ ಈ ಸಿನಿಮಾ ಮೂಡಿಬಂದಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.
ರಾಘು ಮುಖರ್ಜಿ ನಾಯಕನಟನಾಗಿ ಹಾಗೂ ರಾಧಿಕಾ ಚೇತನ್, ಸಂಯುಕ್ತಾ ಹೊರನಾಡು ನಟಿಯರಾಗಿ ನಟಿಸಿರುವ ಈ ಚಿತ್ರ ಹೊಸಬರ ಯಶಸ್ವೀ ನಟನೆಯಲ್ಲಿ ವಿಶೇಷವಾಗಿ ಮೂಡಿಬಂದಿದೆ.
ಮನ್ವಂತರ ಚಿತ್ರರವರ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಹಲವು ಪ್ರಮುಖ ಸಹನಟರ ತಂಡವೇ ಕಾರ್ಯನಿರ್ವಹಿಸಿದ್ದು ಚಿತ್ರದ ಗೆಲುವಿನಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ.
ಇನ್ನು ಚಿತ್ರದ ಹಾಡುಗಳು ಈಗಾಗಲೇ ಪಾಪ್ಯುಲರ್ ಆಗಿದ್ದು, ಜಯಂತ್ ಕಾಯ್ಕಿಣಿ ಹಾಗೂ ಜೋಗಿಯವರು ಬರೆದಿರುವ ಹಾಡುಗಳಿಗೆ ಅನೂಪ್ ಸೆಲೀನ್, ಹರಿಚರಣ್, ಸಿಂಚನಾ ದೀಕ್ಷಿತ್, ಮಿಥುನ್ ಮುಕುಂದನ್,ರಾಜಗುರು ಹೊಸಕೋಟೆ, ಅನನ್ಯಾ ಭಗತ್ ಇನ್ನಿತರರು ತಮ್ಮ ಸುಮಧುರ ಕಂಠದಾನ ಮಾಡಿದ್ದಾರೆ.
ಒಟ್ಟಿನಲ್ಲಿ ಹೊಸ ಚಿಗುರು ಹಳೇ ಬೇರು ಎನ್ನುವಂತೆ, ಹೊಸಬರ ನಟನೆ ಹಾಗೂ ಅನುಭವೀ ನಿರ್ದೇಶನದ ಮೂಲಕ ಪಕ್ವವಾದ ಕಾಫೀತೋಟ ಮೂವೀ ನಾಳೆ ತೆರೆಗೆ ಬರಲಿರುವುದು ಸಿನಿರಸಿಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ.