ಬೆಂಗಳೂರು: ಮಧ್ಯರಾತ್ರಿ ಒಂದು ಗಂಟೆ ತನಕವೂ ಹೊಸ ವರ್ಷವನ್ನು ಪಬ್, ರೆಸ್ಟೋರೆಂಟ್ಗಳಲ್ಲಿ ಅದ್ದೂರಿಯಾಗಿ ಆಚರಿಸಬಹುದು ಅಂದುಕೊಂಡವರಿಗೆ ಸರ್ಕಾರ ಶಾಕ್ ಕೊಟ್ಟಿದೆ.
ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿ.28ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ. ಇದರಿಂದ ಹೊಸ ವರ್ಷಕ್ಕೆ ತಯಾರಾಗಿದ್ದ ಬಾರ್ ರೆಸ್ಟೋರೆಂಟ್ ಹೋಟೆಲ್ ಗಳಿಗೆ ಫುಲ್ ಶಾಕ್ ಆಗಿದೆ.
ಮುಖ್ಯಮಂತ್ರಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಡಿ.28 ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಎಲ್ಲ ಸಂಭ್ರಮಾಚರಣೆ, ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ನಿಷೇಧವನ್ನು ಹೇರಲಾಗಿದೆ. ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್ ಎಲ್ಲವೂ ಬಂದ್ ಆಗಲಿದೆ ಎಂದಿದ್ದಾರೆ.
ಎಲ್ಲಾ ಹೋಟೆಲ್ಗಳಲ್ಲಿ ಶೆ.50 ಜನರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಲಸಿಕೆಯ ವಿಚಾರವಾಗಿ ಹೇಳುವುದಾದರೆ ಮೊದಲ ಡೋಸ್ ಅನ್ನು ಶೇ. 97 ರಷ್ಟು ನೀಡಲಾಗಿದೆ. ಅದು ಶೇ. 100 ರಷ್ಟು ಆಗಬೇಕು ಎನ್ನುವ ಸೂಚನೆಯನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. 2ನೇ ಡೋಸ್ ಅನ್ನು ಶೇ. 75 ರಷ್ಟು ಮಂದಿಗೆ ನೀಡಲಾಗಿದೆ. ಇನ್ನೂ 45 ಲಕ್ಷ ಮಂದಿ 2ನೇ ಡೋಸ್ ತೆಗೆದುಕೊಳ್ಳುವವರಿದ್ದಾರೆ. ಓಮಿಕ್ರಾನ್ ಅತ್ಯಂತ ವೇಗದಲ್ಲಿ ಹರಡುತ್ತಿದೆ. ಹೀಗಾಗಿ ಎಲ್ಲರೂ ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಮಂಗಳವಾರ ರಾತ್ರಿ 10 ಗಂಟೆಯಿಂದಲೇ ಎಲ್ಲವೂ ಬಂದ್ ಆಗಲಿದೆ. 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಎಲ್ಲಾ ಚವಟಿಕೆಗಳಿಗೂ ನಿರ್ಬಂಧವನ್ನು ಹೇರಲಾಗಿದೆ. ಅಂತರ್ ರಾಜ್ಯ ಪ್ರಯಾಣಕ್ಕಷ್ಟೆ ರಾತ್ರಿ 10 ಗಂಟೆ ನಂತರ ಅವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.