ಮಡಿಕೇರಿ: ಕಾವೇರಿ ನೀರಿನ ಪ್ರವಾಹದಿಂದ ಜಲಾವೃತವಾಗಿದ್ದ ರಸ್ತೆಯಲ್ಲಿ ಜೀಪೊಂದು ಸಿಲುಕಿಕೊಂಡ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲು ಹೊದ್ದೂರು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ನಡೆದಿದೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡು ಕಡೆಯಿಂದ ಅಯ್ಯಂಗೇರಿ ಗ್ರಾಮಕ್ಕೆ ನೀಲಿ ಬಣ್ಣದ ಜೀಪಿನಲ್ಲಿ ಮಹಿಳೆ ಸೇರಿದಂತೆ ಮೂವರು ಸಂಚರಿಸುತ್ತಿದ್ದರು. ರಸ್ತೆಯಲ್ಲಿ ನೀರಿನ ಮಟ್ಟ ಕಡಿಮೆ ಇರಬಹುದು ಎಂದು ಭಾವಿಸಿದ ಚಾಲಕ ರಸ್ತೆಯನ್ನು ದಾಟಲು ಪ್ರಯತ್ನಿಸಿದ್ದಾನೆ. ಆದರೆ ರಸ್ತೆಯಲ್ಲಿ ಮುಂದಕ್ಕೆ ಸಾಗುತ್ತಿದ್ದಂತೆ ಜೀಪಿನ ಅರ್ಧದಷ್ಟು ಭಾಗಕ್ಕೆ ನೀರು ಆವೃತವಾಗಿ, ರಸ್ತೆ ಮಧ್ಯದಲ್ಲಿಯೇ ಜೀಪ್ ನಿಂತು ಹೋಗಿದೆ. ಇದರಿಂದ ಜೀಪಿನಲ್ಲಿ ಇದ್ದವರು ಭಯಭೀತರಾಗಿದ್ದಾರೆ. ಇದನ್ನೂ ಓದಿ: ಭರಚುಕ್ಕಿಯಲ್ಲಿ ಪ್ರವಾಸಿಗರ ಹುಚ್ಚಾಟ – ಸಾವಿನ ದವಡೆಯಲ್ಲಿ ಮೋಜು-ಮಸ್ತಿ
ಇದೇ ವೇಳೆ ಪ್ರವಾಹ ವೀಕ್ಷಣೆಗೆಂದು ಸ್ಥಳಕ್ಕೆ ಬಂದ ಕೊಟ್ಟಮುಡಿ ನಿವಾಸಿಗಳಾದ ಮೊಹಮ್ಮದ್ ಹಾಗೂ ಅಬ್ದುಲ್ಲಾ ಅವರಿಗೆ ರಸ್ತೆ ಮಧ್ಯೆ ಪ್ರವಾಹದ ನೀರಿನಲ್ಲಿ ಜೀಪು ನಿಂತಿರುವುದು ಗೋಚರಿಸಿದ್ದಾರೆ. ಕೂಡಲೇ ಸ್ವಗ್ರಾಮದ ಜನರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅವರ ಸಹಾಯದಿಂದ ಜೀಪನ್ನು ನೀರಿನಿಂದ ಎಳೆದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರ ಮೋಜುಮಸ್ತಿ – ಮಿತಿಮೀರಿದ ಹುಚ್ಚಾಟ