ಮಂಗಳೂರು: ತಾಕತ್ತಿದ್ದರೆ ನಮ್ಮ ಜಿಲ್ಲೆಯ ಒಬ್ಬನೇ ಒಬ್ಬ ಬಿಜೆಪಿ ಕಾರ್ಯಕರ್ತನ ಮೈ ಮುಟ್ಟಿ ನೋಡಿ, ಇದಕ್ಕೆ ಬಿಜೆಪಿ ತಕ್ಕ ಪಾಠ ಕಲಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆವೇಶದಲ್ಲಿ ಹೇಳಿಕೆ ನೀಡಿದ್ದ ಹಳೇ ವೀಡಿಯೋ ಇದೀಗ ವೈರಲ್ ಆಗಿದೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಬೆನ್ನಲ್ಲೇ ಕಟೀಲ್ ಅವರ ಈ ವೀಡಿಯೋ ವೈರಲ್ ಆಗಿದೆ. ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ವಿಚಾರವಾಗಿ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ನಾಯಕರ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.
ನಾನು ಕರಾವಳಿ ಜಿಲ್ಲೆಯಲ್ಲಿ ಹೋರಾಟ ಮಾಡಿ ಬಂದವ. ನಮ್ಮ ಜಿಲ್ಲೆಯಲ್ಲಿ ತಾಕತ್ತಿದ್ದರೆ ಒಬ್ಬನೇ ಒಬ್ಬ ಬಿಜೆಪಿ ಕಾರ್ಯಕರ್ತನ ಮೈ ಮುಟ್ಟಿ ನೋಡಿ, ಬಿಜೆಪಿ ಇದಕ್ಕೆ ತಕ್ಕ ಪಾಠ ಕಲಿಸುತ್ತದೆ. ಯಾರೇ ಒಬ್ಬ ಕಾರ್ಯಕರ್ತ ಇದಕ್ಕೆ ಹೆದರುವ ಅವಶ್ಯಕತೆಯಿಲ್ಲ ಎಂದು ನಳಿನ್ ಕುಮಾರ್ ಈ ಹಿಂದೆ ಶಪಥ ಮಾಡಿದ್ದರು. ಇದನ್ನೂ ಓದಿ: ಜನರು ನಿಮ್ಮ ಮೇಲೆ ಇಟ್ಟಿರುವ ಗೌರವವನ್ನು ಉಳಿಸಿಕೊಳ್ಳಿ: ಸರ್ಕಾರಕ್ಕೆ ಪೇಜಾವರ ಶ್ರೀ ಎಚ್ಚರಿಕೆ
ನಳಿನ್ ಕುಮಾರ್ ಅವರು ವೀರಾವೇಶದಿಂದ ಈ ಹೇಳಿಕೆಯೇನೋ ನೀಡಿದ್ದರು. ಆದರೆ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಆಯ್ತು. ಇದೀಗ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬಿಜೆಪಿ ಯುವ ಮೋರ್ಚದ ಪ್ರವೀಣ್ ಹತ್ಯೆ ನಡೆದಿದೆ. ಹೀಗಾದರೆ ನಳಿನ್ ಕುಮಾರ್ ಮಾತಿನಂತೆ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಾ ಅಥವಾ ಅವರು ಆಕ್ರೋಶದ ಮಾತಿಗಷ್ಟೇ ಸೀಮಿತವಾಗಿದ್ದಾರಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ನಳಿನ್ ಕುಮಾರ್ ಅವರ ಈ ಹಳೇ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಅವರು ತಮ್ಮ ಮಾತನ್ನು ಉಳಿಸಿಕೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಪತಿಯ ಕಾರ್ಯ ಮುಗಿಯುವುದರೊಳಗೆ ಆರೋಪಿಗಳಿಗೆ ಶಿಕ್ಷೆ ಆಗ್ಬೇಕು: ಪ್ರವೀಣ್ ಪತ್ನಿ ನೂತನಾ