ತುಮಕೂರು: ದಕ್ಷ ಐಎಎಸ್ ಅಧಿಕಾರಿ ಭೂಬಾಲನ್ ತುಮಕೂರು ಪಾಲಿಕೆ ಆಯುಕ್ತರಾಗಿ ಎರಡನೇ ಬಾರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಹಿಂದೆ ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಆಯುಕ್ತರಾಗಿದ್ದ ಭೂಬಾಲನ್, ಉಪಚುನಾವಣೆ ನಿಮಿತ್ತ ಸರ್ಕಾರ ದಿಢೀರ್ ಬೆಳಗಾವಿಗೆ ವರ್ಗಾವಣೆ ಮಾಡಿತ್ತು.
ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡು ಆಡಳಿತ ಚುರುಕುಗೊಳಿಸಿದ್ದ ಭೂಬಾಲನರನ್ನ ವರ್ಗಾವಣೆ ಮಾಡಿದ ಸರ್ಕಾರದ ಕ್ರಮ ಖಂಡಿಸಿ ನಾಗರೀಕರು ಪ್ರತಿಭಟನೆ ನಡೆಸಿದ್ದರು. ನಾಗರಿಕರ ಹೋರಾಟಕ್ಕೆ ಮಣಿದ ಸರ್ಕಾರ ಇದೀಗ ತುಮಕೂರು ಪಾಲಿಕೆ ಆಯುಕ್ತರಾಗಿ ಭೂಬಾಲನ್ ಅವರನ್ನು ವಾಪಸ್ ವರ್ಗಾವಣೆ ಮಾಡಿದೆ. ಹೀಗಾಗಿ ಇಂದು ಭೂಬಾಲನ್ ಅಧಿಕಾರ ಸ್ವೀಕರಿಸಿದ್ದಾರೆ.
ನಗರದಲ್ಲಿ ಸ್ವಚ್ಛತೆಗೆ ಒತ್ತು ಕೊಟ್ಟ ಭೂಬಾಲನ್, ತೆರಿಗೆ ವಂಚಕರಿಗೂ ಸಿಂಹಸ್ವಪ್ನವಾಗಿ ಕಾಡಿದ್ದರು. ವಸೂಲಾಗದೇ ಇದ್ದ ನೂರಾರು ಕೋಟಿ ತೆರಿಗೆ ವಸೂಲಿ ಮಾಡಿ ಪಾಲಿಕೆ ಬೊಕ್ಕಸ ತುಂಬಿಸಿದ್ದರು. ಸ್ಮಾರ್ಟಿ ಸಿಟಿ ಕಾಮಗಾರಿಯಲ್ಲಿ ಚುರುಕು ಮುಟ್ಟಿಸಿದ್ದರು. ಇವರ ದಿಢೀರ್ ವರ್ಗಾವಣೆಯಿಂದ ಮತ್ತೆ ಪಾಲಿಕೆ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡಿ ನೆಲಕಚ್ಚಿತು. ಈ ಹಿನ್ನೆಲೆಯಲ್ಲಿ ಮತ್ತೆ ಭೂಬಾಲ್ ಪಾಲಿಕೆ ಆಯುಕ್ತರಾಗಿ ಬರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು.
ಇಂದು ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಆಯುಕ್ತರು, ನಗರದ ಸ್ವಚ್ಛತೆ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಹೆಚ್ಚಿನ ಆಸ್ಥೆವಹಿಸಲಾಗುವು ಎಂದು ಪ್ರತಿಕ್ರಿಯಿಸಿದ್ದಾರೆ.