ರಾಮನಗರ: ಸಿದ್ದರಾಮಯ್ಯ (Siddaramaiah) ಐದು ವರ್ಷ ಸಿಎಂ ಆಗಲು ಹೋರಾಟ ಮಾಡಬೇಕೆಂಬ ಯತೀಂದ್ರ (Yatindra) ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಯಾಕೆ ಚರ್ಚೆ ಮಾಡಿದರು ಅಂತ ಅವರನ್ನೇ ಕೇಳಿ. ಅವರು ರೀತಿ ಹೇಳುವ ಅವಶ್ಯಕತೆ ಇಲ್ಲ ಎಂದರು.
ಭಾರತ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನದ (Pakistan) ರೀತಿ ದಿವಾಳಿಯಾಗುತ್ತದೆಂಬ ಯತೀಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ದೇಶ ಬಲಿಷ್ಠವಾಗಿದೆ. ಈ ದೇಶಕ್ಕೆ ಭದ್ರ ಬುನಾದಿ ಹಾಕಿರುವುದು ಕಾಂಗ್ರೆಸ್. ನೆಹರು ನಮಗೆ ಗಟ್ಟಿ ತಳಪಾಯ ಕೊಟ್ಟಿದ್ದಾರೆ. ಆದಾದ ಬಳಿಕ ಬಂದ ಪ್ರಧಾನಿಗಳು ಅವರ ಶಕ್ತಿಅನುಸಾರ ಕೆಲಸ ಮಾಡಿದ್ದಾರೆ. ಅದನ್ನು ಹೊರತು ಪಡಿಸಿ ಬೇರೆ ವಿಚಾರಗಳಿಗೆ ಮಾತನಾಡಲ್ಲ. ಯತೀಂದ್ರ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಿ ಎಂದು ತಿಳಿಸಿದರು. ಇದನ್ನೂ ಓದಿ: ಡಿವೋರ್ಸ್ ಕೊಡು ಇಲ್ಲದಿದ್ರೆ ಅಶ್ಲೀಲ ವೀಡಿಯೋ ವೈರಲ್ ಮಾಡ್ತೀನಿ- ಪತ್ನಿಗೆ ಬ್ಲ್ಯಾಕ್ಮೇಲ್
ಕರಸೇವಕರ ಬಂಧನ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಬಂಧಿತ ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಗಳಿವೆ. ಕೋರ್ಟ್ ಆದೇಶದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದರು.
ಕಾನೂನಿನ ಪ್ರಕಾರ ಪೊಲೀಸರು ಕೆಲಸ ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿ 20 ಸಾವಿರ ಮಂದಿಯನ್ನ ರೌಡಿಶೀಟರ್ ನಿಂದ ತೆಗೆಸಿದ್ದರು. ಬಳಿಕ ಪಕ್ಷದ ಶಾಲು ಹಾಕಿ ಬಿಜೆಪಿಗೆ ಸೇರಿಸಿಕೊಂಡಿದ್ದರು. ಇದು ಬಿಜೆಪಿಯವರು ಕೊಟ್ಟಿದ್ದ ಆಡಳಿತ ಎಂದು ವ್ಯಂಗ್ಯವಾಡಿದರು.
ಗೋಧ್ರಾ ರೀತಿ ಮತ್ತೊಂದು ದುರಂತ ಸಂಭವಿಸುತ್ತದೆಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಹರಿಪ್ರಸಾದ್ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದವರು. ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಹಾಗಾಗಿ ಅವರಿಗೆ ಮಾಹಿತಿ ಇರಬಹುದು. ನೀವು ಅದರ ಬಗ್ಗೆ ಅವರನ್ನೇ ಕೇಳಿ ಎಂದರು.