ಉಡುಪಿ: ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಅವರು ಇಂದು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಪತಿಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಪತ್ನಿ ಹಾಗೂ ಮಗಳು ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಪತಿಯ ಚಿತೆಯ ಮುಂದೆ ನಿಂತಿದ್ದ ಪತ್ನಿ ಸ್ವರ್ಣ ದುಃಖಿತರಾದ್ರೆ, ಮಗಳು ಸಮ್ಯಾ ನನಗೆ ಅಪ್ಪ ಬೇಕು ಅಂತ ಕಣ್ಣೀರು ಹಾಕಿರುವುದು ನೆರೆದವರಲ್ಲಿ ಮತ್ತಷ್ಟು ಕಣ್ಣೀರಿಗೆ ಕಾರಣವಾಯಿತು. ಈ ವೇಳೆ ಕುಟುಂಬದವರು ಹಾಗೂ ಸಮಾಧಾನ ಮಾಡಿ ಸಾಂತ್ವಾನ ಹೇಳಿದ್ದಾರೆ.
ಶೆಟ್ಟಿಯವರಿಗೆ ಒಬ್ಬಳೇ ಹೆಣ್ಣು ಮಗಳಿದ್ದು, ಹೀಗಾಗಿ ಅವರ ಚಿತೆಗೆ ನಾಲ್ವರಿಂದ ಅಗ್ನಿ ಸ್ಪರ್ಶ ಮಾಡಲಾಯಿತು. ಮಗಳು ಸಮ್ಯಾ, ಅಣ್ಣನ ಮಗ ಸಾರಂಗ್, ಸಹೋದರ ಮುರುಳಿಧರ್ ಶೆಟ್ಟಿ, ಸುಧಾಕರ್ ಶೆಟ್ಟಿಯಿಂದ ಬೆಂಕಿ ಕೊಡಲಾಯಿತು. ಈ ಮೂಲಕ ಮಧುಕರ್ ಶೆಟ್ಟಿಯವರು ತಮ್ಮ ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿಯಲ್ಲಿಯೇ ಪಂಚಭೂತಗಳಲ್ಲಿ ಲೀನರಾದರು.
ಮಧುಕರ್ ಶೆಟ್ಟಿಯವರ ತೋಟದಲ್ಲಿ ಧಾರ್ಮಿಕ ವಿಧಿವಿಧಾನ ಮೂಲಕ ಬಂಟ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ತಂದೆ-ತಾಯಿಯ ಸಮಾಧಿ ಬಳಿಯೇ ಇವರ ಅಂತ್ಯಕ್ರಿಯೆ ನಡೆದಿದೆ. ಈ ವೇಳೆ ಕುಟುಂಬಸ್ಥರು, ಹಿರಿಯ ಪೊಲಿಸ್ ಅಧಿಕಾರಿಗಳು, ಸಾರ್ವಜನಿಕರು, ಅಭಿಮಾನಿಗಳು ಸೇರಿದಂತೆ ಗಣ್ಯಾತೀಗಣ್ಯರು ಭಾಗಿಯಾಗಿದ್ದರು.
ಎಚ್ 1 ಎನ್ 1 ಜ್ವರ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಐಪಿಎಸ್ ಖಡಕ್ ಅಧಿಕಾರಿ ಮಧುಕರ್ ಶೆಟ್ಟಿ(47)ಯವರು ಶುಕ್ರವಾರ ರಾತ್ರಿ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅಂದು ಮನೆಯಲ್ಲಿಯೇ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಯಿತು. ಸಹೋದ್ಯೋಗಿಗಳು ಹಾಗೂ ಇತರ ಗಣ್ಯರು ಅಂತಿಮ ದರ್ಶನ ಪಡೆದಿದ್ದರು. ವಿಶೇಷವೆಂದರೆ ಸಹೋದ್ಯೋಗಿಯೊಬ್ಬರು ಮಧುಕರ್ ಅವರ ಇಷ್ಟದ ಹಾಡನ್ನು ಹಾಡಿ ಕಣ್ಣೀರ ವಿದಾಯ ಹೇಳಿದ್ದರು. ಈ ವೇಳೆ ನೆರೆದಿದ್ದ ಮಂದಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಳಿಕ ಅಲ್ಲಿಂದ ಶನಿವಾರ ಮೃತದೇಹವನ್ನು ಬೆಂಗಳೂರಿಗೆ ರವಾನೆ ಮಾಡಲಾಯಿತು. ಯಲಹಂಕದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದಲ್ಲಿಯೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಲಿಸಲಾಗಿದ್ದು ರಾಜಕಾರಣಿಗಳು, ಗಣ್ಯರು ಸೇರಿದಂತೆ ಸಾವಿರಾರು ಮಂದಿ ಕರುನಾಡ ಸಿಂಗಂಗೆ ಅಂತಿಮ ವಿದಾಯ ತಿಳಿಸಿದ್ರು. ಅಲ್ಲಿಂದ ನೇರವಾಗಿ ಮಧುಕರ್ ಹುಟ್ಟೂರು ಕುಂದಾಪುರದ ಯಡಾಡಿಗೆ ಮೃತದೇಹವನ್ನು ಸಾಗಿಸಲಾಗಿದ್ದು, ಇಂದು ಅವರು ಪಂಚಭೂತಗಳಲ್ಲಿ ಲೀನವಾದ್ರು.
https://www.youtube.com/watch?v=umjUL4BMlBc
https://www.youtube.com/watch?v=_uRFFyi3Qic
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv