ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ತಯಾರಿ ಆರಂಭವಾಗಿದೆ. ಭಾರತ್ ಜೋಡೊ ಯಾತ್ರೆ ಮೂಲಕ ಕಾಂಗ್ರೆಸ್(Congress) ಬಲವರ್ಧನೆ ಪ್ರಯತ್ನಗಳು ನಡೆಯುತ್ತಿದ್ದರೇ, ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ತೃತೀಯ ರಂಗ ಸ್ಥಾಪನೆಗೆ ಕಸರತ್ತು ಆರಂಭಿಸಿದ್ದಾರೆ. ಈ ನಡುವೆ ಬಿಜೆಪಿಯೂ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಹೊಸ ತಂತ್ರಗಳನ್ನು ರೂಪಿಸುತ್ತಿದೆ.
ಲೋಕಸಭೆ ಚುನಾವಣೆ(Election) ತಯಾರಿ ನಡೆಸಿರುವ ಬಿಜೆಪಿ(BJP) ಹೈಕಮಾಂಡ್ ಪ್ರಮುಖ 144 ಕ್ಷೇತ್ರಗಳ ಮೇಲೆ ಗಮನ ಹರಿಸಿದೆ. 2019ರ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರಗಳನ್ನು ಪಟ್ಟಿ ಮಾಡಿರುವ ಹೈಕಮಾಂಡ್ ನಾಯಕರು ಕೇಂದ್ರ ಸಚಿವರನ್ನು ಸಂಘಟನೆಗೆ ನಿಯೋಜಿಸುವ ಮೂಲಕ ಗೆಲುವಿಗೆ ಹೊಸ ಪ್ಲ್ಯಾನ್ ರೂಪಿಸುತ್ತಿದೆ.
ದಕ್ಷಿಣ ಮತ್ತು ಪೂರ್ವ ಭಾರತದ 144 ಕ್ಷೇತ್ರಗಳನ್ನು ಬಿಜೆಪಿ ಆಯ್ಕೆ ಮಾಡಿಕೊಂಡಿದ್ದು, ಕೇಂದ್ರ ಸಚಿವರು ಈ ಕ್ಷೇತ್ರಗಳಲ್ಲಿ ಕನಿಷ್ಠ 48 ಗಂಟೆಗಳ ಪ್ರವಾಸ ಮಾಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೇ ಆಗ್ಗಾಗ್ಗೆ ಭೇಟಿ ನೀಡಿ ಜನರೊಂದಿಗೆ ಬೆರೆಯುವಂತೆ ನಿರ್ದೇಶನ ನೀಡಲಾಗಿದೆ. ಈ ಕ್ಷೇತ್ರಗಳ ಪ್ರವಾಸ ವೇಳೆ ಜನರೊಂದಿಗೆ ಸಂವಾದ ನಡೆಸಿ, ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಸೇರಿದಂತೆ ಜನರ ಅಗತ್ಯತೆಗಳನ್ನು ಅರಿಯುವಂತೆ ಪಕ್ಷ ಸೂಚಿಸಿದೆ.
ಗೃಹ ಸಚಿವ ಅಮಿತ್ ಶಾ(Amit Shah) ಇದನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ(JP Nadda), ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಸಂಘಟನೆ ದುರ್ಬಲವಾದರೇ ಗೆಲುವು ಸುಲಭವಲ್ಲ. ಹೀಗಾಗಿ ಕಠಿಣ ಕ್ರಮದೊಂದಿಗೆ ಪಕ್ಷ ಕಟ್ಟುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಮೇ ತಿಂಗಳಲ್ಲಿ ಸಚಿವ ಸಂಪುಟ ಪುನಾರಚನೆ ಬಳಿಕ 144 ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಅಗಸ್ಟ್ 31ರ ವೇಳೆಗೆ ವರದಿ ನೀಡಲು ಸೂಚನೆ ನೀಡಲಾಗಿತ್ತು. ಅದು ಸಾಧ್ಯವಾಗದ ಹಿನ್ನೆಲೆ ಸೆಪ್ಟೆಂಬರ್ ಅಂತ್ಯಕ್ಕೆ ವರದಿ ನೀಡಲು ಕೇಂದ್ರ ಸಚಿವರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಅಕ್ಟೋಬರ್ನಿಂದ ಎರಡನೇ ಹಂತದ ಪ್ರವಾಸಕ್ಕೂ ಸಮಯ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಬಿಎಸ್ವೈ, ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ – ಮರು ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶ
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್ ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಸ್ಮೃತಿ ಇರಾನಿ, ಗಜೇಂದ್ರ ಸಿಂಗ್ ಶೇಖಾವತ್, ಅನುರಾಗ್ ಠಾಕೂರ್ಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು ಮತ್ತು ಕೇರಳದಲ್ಲಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ.
2019ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯು ಗೆಲ್ಲಲು ಸಾಧ್ಯವಾಗದ ಸುಮಾರು 115 ಕ್ಷೇತ್ರಗಳನ್ನು 2016ರಲ್ಲಿ ಹೊಸ ಜಲಾನಯನ ಪ್ರದೇಶ ಎಂದು ಬಿಜೆಪಿ ಗುರುತಿಸಿತ್ತು. ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಈಶಾನ್ಯ 6 ರಾಜ್ಯಗಳಲ್ಲಿ ಸಂಘಟನೆ ಆರಂಭಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಸುಧಾರಿಸಿತ್ತು. ಹೀಗಾಗಿ ಇದೇ ಪ್ರಯತ್ನ ಪುನಾರಂಭಗೊಂಡಿದೆ. ಇದನ್ನೂ ಓದಿ: ರೈಲಿಗೆ ಸಿಲುಕಿ ಎರಡನೇ ತರಗತಿ ವಿದ್ಯಾರ್ಥಿ ಸಾವು